ಪುತ್ತೂರು: ರಥಸಪ್ತಮಿ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ನೇತ್ರಾವತಿ ವಲಯ, ಪುತ್ತೂರು ತಾಲೂಕು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಸಹಯೋಗದೊಂದಿಗೆ ನೆಹರುನಗರದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿ 108 ಸೂರ್ಯ ಸನಮಸ್ಕಾರ ಕಾರ್ಯಕ್ರಮ ನಡೆಯಿತು.
ಸೂರ್ಯಾರಾಧನೆಯ ವೈಜ್ಞಾನಿಕ ಮಹತ್ವಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವುದು, ದೈಹಿಕ, ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದು ಹಾಗೂ ಯೋಗದ ಮಹತ್ವವನ್ನು ಸಮಾಜದ ಎಲ್ಲಾ ವರ್ಗಗಳಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಯಿತು.


ಬೆಳಗ್ಗೆ ಭಜನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮವು 3 ಹಂತಗಲ್ಲಿ 108 ಸೂರ್ಯನಮಸ್ಕಾರಗಳನ್ನು ಮಾಡಲಾಯಿತು. ಈ ವೇಳೆ ರಥ ಸಪ್ತಮಿಯಂದು ಸೂರ್ಯ ನಮಸ್ಕಾರ ಮಾಡುವ ಮಹತ್ವದ ಕುರಿತು ಯೋಗಬಂಧು ಜಯಲಕ್ಷ್ಮೀ ಅವರು ಮಾಹಿತಿ ನೀಡಿದರು.
ಪುತ್ತೂರಿನ ಸುತ್ತಮುತ್ತಲಿನ ಪತಂಜಲಿ ಸಮಿತಿಯ ಯೋಗ ಪಟುಗಳು, ನಾಗರಿಕರು ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ 700ಕ್ಕೂ ಹೆಚ್ಚು ಮಂದಿ ಸೂರ್ಯನಮಸ್ಕಾರದಲ್ಲಿ ಭಾಗವಹಿಸಿದರು.
ಇದನ್ನೂ ಓದಿ: ಪ್ರಸಿದ್ಧ ಪುತ್ತೂರು ಕಂಬಳದ ಫಲಿತಾಂಶ ಇಲ್ಲಿದೆ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ., ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ ಎಂದು ಕರೆನೀಡಿದರು. ಸಂಸ್ಕಾರ, ಸಂಘಟನೆ ಮತ್ತು ಸೇವೆಗಳು ಪತಂಜಲಿ ಯೋಗ ಶಿಕ್ಷಣದ ಮುಖ್ಯ ಉದ್ದೇಶವಾಗಿದೆ ಎಂದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ, ತಾಲೂಕು ಸಂಚಾಲಕ ಕೃಷ್ಣಾನಂದ, ಶುಭ, ಶಶಿಕಲಾ ಹಾಗೂ ಬಾಲಕೃಷ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾನಸಿಕ ಸಿದ್ಧತೆಯನ್ನು ಸುಮಾ ನೆರವೇರಿಸಿದರು. ಪ್ರಾತ್ಯಕ್ಷಿತೆಯಲ್ಲಿ ಯೋಗಬಂಧುಗಳಾದ ಭವ್ಯ ಶರಣಾಕ್ಷಿ, ಕುಸುಮಾಧರ, ರವಿಶಂಕರ, ರಕ್ಷಿತ್, ಚೇತನ, ನಿಶಾಂತ್, ಸಂಧ್ಯಾ, ಪ್ರದೀಪ್, ಪವಿತ್ರ, ಸಂತೋಷ, ಜ್ಯೋತಿ, ಮೋಹನ, ರಾಧಿಕಾ, ಪೂರ್ಣಿಮಾ ಹಾಗೂ ಕುಶಾಲ ಅವರು ಸಹಕರಿಸಿದರು. ದಿವ್ಯ ಸ್ವಾಗತಿಸಿ, ವಿವೇಕಾನಂದ ವಸತಿನಿಲಯಗಳ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಪ್ರಭು ವಂದಿಸಿದರು. ಜೈತ್ರಿಕ ನಿರೂಪಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

