Breaking News

ಓಡುವ ಬಸ್‌ನ ವಿಂಡ್‌ಶೀಲ್ಡ್ ಹಿಡಿದು 500 ಮೀಟರ್ ಜೋತಾಡಿದ ಪ್ರಯಾಣಿಕ: ಚಾಲಕ ಅಮಾನತು

ತಮಿಳುನಾಡು : ಚಾಲಕ ಹಾಗೂ ಪ್ರಯಾಣಿಕನ ನಡುವೆ ಉಂಟಾದ ಸಣ್ಣ ಮಾತಿನ ಚಕಮಕಿಯೊಂದು ವಿಕೋಪಕ್ಕೆ ತಿರುಗಿ, ಚಲಿಸುತ್ತಿದ್ದ ಸರ್ಕಾರಿ ಬಸ್‌ನ ಮುಂಭಾಗದ ಗ್ಲಾಸ್ (ವಿಂಡ್‌ಶೀಲ್ಡ್) ಹಿಡಿದು ಪ್ರಯಾಣಿಕನೊಬ್ಬ ಸುಮಾರು 500 ಮೀಟರ್ ದೂರ ಜೋತಾಡಿಕೊಂಡು ಸಾಗಿದ ಭೀಕರ ಹಾಗೂ ಆತಂಕಕಾರಿ ಘಟನೆ ಹೊಸೂರಿನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (TNSTC) ಬಸ್ ಚಾಲಕ ಎಂ. ರಮೇಶ್ ಕುಮಾರ್ ಅವರನ್ನು ಇಲಾಖೆ ಅಮಾನತುಗೊಳಿಸಿ (Suspended) ಆದೇಶಿಸಿದೆ.

ಹೊಸೂರಿನಿಂದ ಪನ್ನಪಳ್ಳಿಗೆ ತೆರಳುತ್ತಿದ್ದ ಟೌನ್ ಬಸ್‌ನಲ್ಲಿ ಬಾಗಲೂರು ಮೂಲದ ಪ್ರಯಾಣಿಕನೊಬ್ಬ ತುಮ್ಮನಪಳ್ಳಿಗೆ ಪ್ರಯಾಣಿಸಲು ಹತ್ತಿದ್ದನು. ಆದರೆ ನಿಯೋಜಿತ ನಿಲುಗಡೆಗಿಂತ ಮುಂಚೆಯೇ ತನ್ನನ್ನು ಇಳಿಸುವಂತೆ ಆತ ಚಾಲಕ ರಮೇಶ್ ಕುಮಾರ್ ಅವರಿಗೆ ಕೇಳಿಕೊಂಡಿದ್ದಾನೆ. ಚಾಲಕ ಇದಕ್ಕೆ ನಿರಾಕರಿಸಿದ್ದರಿಂದ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: ಡ್ಯಾನ್ಸ್ ಚಿತ್ರೀಕರಣದಲ್ಲಿ ರಶ್ಮಿಕಾ ಮಂದಣ್ಣಗೆ ಅಪರೂಪದ ಹಿಪ್ ಇಂಜುರಿ! ರಣಬಾಳಿ ಅಥವಾ ಮೈಸಾ ಶೂಟಿಂಗ್‌ ವಿಳಂಬ

ನಿಲ್ದಾಣ ತಲುಪಿ ಪ್ರಯಾಣಿಕ ಕೆಳಗಿಳಿದರೂ ಆಕ್ರೋಶ ತಣಿಯದೆ ಬಸ್‌ನ ಮುಂಭಾಗದಲ್ಲಿ ಬಂದು ನಿಂತಿದ್ದಾನೆ. ಈ ವೇಳೆ ಚಾಲಕ ಬಸ್ ಚಲಾಯಿಸಲು ಯತ್ನಿಸಿದಾಗ, ಕೋಪಗೊಂಡ ಪ್ರಯಾಣಿಕ ಬಸ್‌ನ ಮುಂಭಾಗದ ವಿಂಡ್‌ಶೀಲ್ಡ್ ಕನ್ನಡಿಯನ್ನೇ ಗಟ್ಟಿಯಾಗಿ ಹಿಡಿದುಕೊಂಡು ಜೋತಾಡಿದ್ದಾನೆ.

ಬಸ್‌ನ ಮುಂಭಾಗದಲ್ಲಿ ವ್ಯಕ್ತಿ ಜೋತಾಡುತ್ತಿದ್ದರೂ ಚಾಲಕ ಬಸ್ ನಿಲ್ಲಿಸದೆ ಸುಮಾರು 500 ಮೀಟರ್ ದೂರ ಬಸ್ ಚಲಾಯಿಸಿಕೊಂಡು ಹೋಗಿದ್ದಾನೆ. ನಂತರ ಬಸ್ ಅನ್ನು ನಿಲ್ಲಿಸಲಾಗಿದೆ. ಬಸ್‌ನಲ್ಲಿದ್ದ ಇತರ ಪ್ರಯಾಣಿಕರೊಬ್ಬರು ಈ ಸಂಪೂರ್ಣ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ತೀವ್ರ ವೈರಲ್ ಆಗಿದೆ.

ಅಪಾಯಕಾರಿ ರೀತಿಯಲ್ಲಿ ಬಸ್ ಚಲಾಯಿಸಿ ಪ್ರಯಾಣಿಕನ ಜೀವಕ್ಕೆ ಅಪಾಯ ತಂದೊಡ್ಡಿದ ಚಾಲಕನ ವಿರುದ್ಧ ಬಂದ ದೂರು ಹಾಗೂ ವೈರಲ್ ವೀಡಿಯೊವನ್ನು ಗಂಭೀರವಾಗಿ ಪರಿಗಣಿಸಿದ TNSTC ಜನರಲ್ ಮ್ಯಾನೇಜರ್, ಚಾಲಕ ರಮೇಶ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *