ದೆಹಲಿ: ರಾಜಧಾನಿ ದೆಹಲಿಯ ಆಶ್ರಮ ಬಳಿಯ ಕಿಲೋಕರಿ ಗ್ರಾಮದಲ್ಲಿ ತಡರಾತ್ರಿ ಢಾಬಾ ಸಿಬ್ಬಂದಿ ಹಾಗೂ ಡೆಲಿವರಿ ಬಾಯ್ಸ್ ಮಾಡುತ್ತಿದ್ದ ಶಬ್ದ ಮತ್ತು ಕಿರಿಕಿರಿಯನ್ನು ಪ್ರಶ್ನಿಸಿದ 54 ವರ್ಷದ ಮಣಿಪುರದ ಖ್ಯಾತ ಸಂಗೀತ ಶಿಕ್ಷಕ ಚೋಂಗ್ಥಮ್ ವಿಕ್ರಮ್ ಸಿಂಗ್ ಅವರ ಮೇಲೆ ಯುವಕರ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದೆ.
ಮೃತರ ಮನೆಯ ಎದುರುಗಡೆ ಇದ್ದ ಢಾಬಾ ಸಿಬ್ಬಂದಿ ಹಾಗೂ ಡೆಲಿವರಿ ಬಾಯ್ಗಳು ತಡರಾತ್ರಿ ಶಬ್ದ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದರು. ಇದನ್ನು ಪ್ರಶ್ನಿಸಲು ಚೋಂಗ್ಥಮ್ ಸಿಂಗ್ ಅವರು ಮನೆಯಿಂದ ಕೆಳಗೆ ಇಳಿದು ಬಂದು ಶಬ್ದ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದರು.
ಈ ವೇಳೆ ಮಾತಿಗೆ ಮಾತು ಬೆಳೆದು ಯುವಕರ ಗುಂಪು ಸಿಂಗ್ ಅವರ ಮನೆ ಮುಂಭಾಗವೇ ಎದೆಗೆ ಒದ್ದು, ಮುಷ್ಟಿಯಿಂದ ತೀವ್ರವಾಗಿ ಥಳಿಸಿದೆ. ಅವರು ರಕ್ಷಣೆಗಾಗಿ ಮನೆಗೆ ಓಡಿದಾಗ, ಆರೋಪಿಗಳು ಕಟ್ಟಡದ ಒಳಗೂ ನುಗ್ಗಿ ಮತ್ತಷ್ಟು ಬಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಸಿಂಗ್ ಅವರನ್ನು ಅವರ ಮಗ ಯೈಫಾಬಾ ತಕ್ಷಣ ‘ಹೋಲಿ ಫ್ಯಾಮಿಲಿ’ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಗೌರಿ-ಗಣೇಶ ಹಬ್ಬಕ್ಕೆ ‘ಕೆಎಸ್ಆರ್ಟಿಸಿ’ ಬಿಗ್ ಆಫರ್: ಬೆಂಗಳೂರಿನಿಂದ 2,400 ಹೆಚ್ಚುವರಿ ವಿಶೇಷ ಬಸ್ಗಳ ಸಂಚಾರ
ಹಲ್ಲೆ ನಡೆಸಿದ ಬಳಿಕ ಆರೋಪಿಗಳು ಕಟ್ಟಡದಿಂದ ಹೊರಗೆ ಓಡಿ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಸನ್ಲೈಟ್ ಕಲೋನಿ ಠಾಣೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎಫ್ಐಆರ್ (FIR) ದಾಖಲಿಸಿಕೊಂಡು 8 ಮಂದಿಯನ್ನು ಬಂಧಿಸಿದ್ದಾರೆ.

