ಬಂಟ್ವಾಳ: ಅಮೃತ ನಗರೋತ್ಥಾನ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 2 ಕೋಟಿ 56 ಲಕ್ಷ ರೂ. ವೆಚ್ಚದ ಯೋಜನೆಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಶನಿವಾರ ಶಿಲಾನ್ಯಾಸ ನೆರವೇರಿಸಿದರು.
ಬಡ್ಡಕಟ್ಟೆ ನೇತ್ರಾವತಿ ನದಿ ಕಿನಾರೆಯಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಳಚರಂಡಿ ಯೋಜನೆ (ಯುಜಿಡಿ) ಅನುಷ್ಠಾನಕ್ಕೆ ಶೀಘ್ರವೇ ವೇಗ ಸಿಗಲಿದೆ ಎಂದು ಹೇಳಿದರು. ಜೊತೆಗೆ ಅಮೃತ್ ಯೋಜನೆಯ ಎರಡನೇ ಹಂತದಲ್ಲಿ ಕುಡಿಯುವ ನೀರಿನ ಯೋಜನೆಗೂ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಲೇಡಿಗೋಷನ್ ಆಸ್ಪತ್ರೆ ಕಟ್ಟಡ ಕಾಮಗಾರಿ ಪಾವತಿ ವಿವಾದ ಅಂತ್ಯ: ಲೋಕ ಅದಾಲತ್ನಲ್ಲಿ 1.83 ಕೋಟಿ ಪರಿಹಾರ ಒಪ್ಪಂದ
ವಿವಿಧ ಅಭಿವೃದ್ಧಿ ಕಾಮಗಾರಿಗಳು
- ಯೋಜನೆಯಡಿ ಹಲವು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮೀಸಲಿಡಲಾಗಿದೆ
- ಬಂಟ್ವಾಳ ಕಾಸ್ಬಾ ಗ್ರಾಮದ ಬಡ್ಡಕಟ್ಟೆ ಹಿಂದು ರುದ್ರಭೂಮಿ ಅಭಿವೃದ್ಧಿ ಹಾಗೂ ಉದ್ಯಾನವನ ನಿರ್ಮಾಣಕ್ಕೆ 57.59 ಲಕ್ಷ
- ಪೌರಕಾರ್ಮಿಕರಿಗೆ ವಸತಿ ಸಮುಚ್ಚಯ ನಿರ್ಮಾಣಕ್ಕೆ 29.77 ಲಕ್ಷ
- ಭಂಡಾರಿಬೆಟ್ಟು ಮೈರಾನ್ ಪಾದೆ ಪ.ಜಾತಿ ಸಮುದಾಯ ಭವನ ಅಭಿವೃದ್ಧಿ, ಗಾಂದೋಡಿ ಸಂಪರ್ಕ ಕಾಲುಸಂಕ ಮತ್ತು ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳಿಗೆ 71.46 ಲಕ್ಷ
- ಪಾಣೆಮಂಗಳೂರು ಗ್ರಾಮದ ಬೊಂಡಾಲ ಮಹಮ್ಮಾಯಿ ದೇವಸ್ಥಾನ ರಸ್ತೆ ಅಭಿವೃದ್ಧಿ, ಬೊಂಡಾಲ–ಕಲ್ಲಡ್ಕ ಗುಂಡೂರು ಸಂಪರ್ಕ ರಸ್ತೆ ಹಾಗೂ ಚೆಂಡಾಡಿ–ಅಲೆತ್ತೂರು ರಸ್ತೆ ಅಭಿವೃದ್ಧಿಗೆ 47.26 ಲಕ್ಷ
- ಬಿ.ಮೂಡ, ಬಿ.ಕಸ್ಟಾ ಮತ್ತು ಪಾಣೆಮಂಗಳೂರು ಗ್ರಾಮಗಳಲ್ಲಿ ದಾರಿದೀಪ ವಿಸ್ತರಣೆ ಹಾಗೂ ಸೆಮಿ ಹೈಮಾಸ್ಟ್ ಬೀದಿದೀಪ ಅಳವಡಿಕೆಗೆ 50 ಲಕ್ಷ ನಿಗದಿಪಡಿಸಲಾಗಿದೆ.
ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಡಾ. ವಸಂತ ಬಾಳಿಗಾ, ಪುರಸಭೆಯ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ, ಮಾಜಿ ಸದಸ್ಯರು ಹಾಗೂ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಪುರಸಭಾ ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಹರಿಪ್ರಸಾದ್ ಭಂಡಾರಿಬೆಟ್ಟು ನಿರ್ವಹಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

