ಬೆಳ್ತಂಗಡಿ: ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ 10ನೇ ವರ್ಷದ ಜಾತ್ರಾ ಮಹೋತ್ಸವವು ಜ.23 ರಿಂದ ವಿಜ್ರಂಭಣೆಯಿಂದ ನಡೆಯುತ್ತಿದೆ. ಜಾತ್ರೆ ಪ್ರಯುಕ್ತ ಡಾ.ವೀಣಾ ಬನ್ನಂಜೆ ಅವರಿಂದ ಸತತ ಎಂಟು ದಿನಗಳ ಕಾಲ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ ನಡೆಯುತ್ತಿದ್ದು, ನೂರಾರು ಸಂಖ್ಯೆಯಲ್ಲಿ ಜನರು ಕೃಷ್ಣನ ಕುರಿತ ಪ್ರವಚನಕ್ಕೆ ಕಿವಿಗೊಡುತ್ತಿದ್ದಾರೆ. ಈ ಪ್ರವಚನಕ್ಕೆ ನಾಳೆ ವೀಣಾ ಬನ್ನಂಜೆ ಅವರು ಪೂರ್ಣ ವಿರಾಮ ಹಾಕಲಿದ್ದಾರೆ.
ಭೀಷ್ಮ ಏಕಾದಶಿ
ಇಂದು ಭೀಷ್ಮ ಏಕಾದಶಿ ಪ್ರಯುಕ್ತ ಬೆಳಗ್ಗೆ 8.30ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ವಿಷ್ಣು ಸಹಸ್ರನಾಮ ಯಜ್ಞ ನಡೆಯಲಿದ್ದು, ಸಂಜೆ 4 ಗಂಟೆಯಿಂದ ಸಹಸ್ರಾರು ಭಕ್ತರಿಂದ ಕೋಟಿ ಕಂಠ ವಿಷ್ಣು ಸಹಸ್ರನಾಮ ಪಠಣಕ್ಕೆ ಗೋಪಾಲಕೃಷ್ಣ ದೇವಾಲಯವು ಸಾಕ್ಷಿಯಾಗಲಿದೆ.


ಕೃಷ್ಣನಿಗೆ ತುಳಸಿ ನಾಮಾರ್ಚನೆ
ಜ.30 ರಂದು ಬೆಳಗ್ಗೆ 6 ಗಂಟೆಗೆ ಶ್ರೀ ಕೃಷ್ಣನಿಗೆ ತುಳಸಿ ನಾಮಾರ್ಚನೆ ಹಾಗೂ ಬೆಳಗ್ಗೆ 8 ಗಂಟೆಗೆ ಕೊಡಮಣಿತ್ತಾಯ ದೈವದ ಪ್ರತಿಷ್ಠೆ ನೆರವೇರಲಿದೆ. ರಾತ್ರಿ 8.30ರ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಇದನ್ನೂ ಓದಿ: ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಬಂಟ್ವಾಳದ ಚೈತನ್ಯಾಳಿಗೆ 5ನೇ ಸ್ಥಾನ
ಜ.31 ರಂದು ಬೆಳಗ್ಗೆ 8.30ಕ್ಕೆ ಇಂದಬೆಟ್ಟು, ನಾವೂರು, ನಡ, ಕನ್ಯಾಡಿ ಗ್ರಾಮದ ಹಸಿರು ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದ್ದು, ಸಂಜೆ 6 ಗಂಟೆಗೆ ಭಜನಾ ಕಮ್ಮಟ ಹಾಗೂ ಅಷ್ಟಾವಧಾನ ಸೇವೆ ನೆರವೇರಲಿದೆ.

ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ
ಜಾತ್ರೋತ್ಸವದ ಕೊನೆಯ ದಿನವಾದ ಫೆ.1 ರಂದು ಬೆಳಗ್ಗೆ 7 ರಿಂದ ಗಣಹೋಮ, ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 12.30 ರಿಂದ ಅನ್ನಸಂತರ್ಪಣೆ ನಡೆದು ಸಂಜೆ 6 ರಿಂದ ದುರ್ಗಾಪೂಜೆ, ರಂಗಪೂಜೆ, ಧಾರ್ಮಿಕ ಸಭೆ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
(ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com)

