ಹಾಸನ: ಜಿಲ್ಲೆಯ ಸಕಲೇಶಪುರದ ಬೆಟ್ಟದ ಬೈರವೇಶ್ವರ ದೇವಾಲಯದ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿದ್ದ ಯುವ ಜೋಡಿ ಮತ್ತು ಅವರ ತಂಡದ ಮೇಲೆ ಸ್ಥಳೀಯ ಪುಂಡರು ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಶೂಟಿಂಗ್ ಮಾಡುತ್ತಿದ್ದದ್ದನ್ನು ವಿರೋಧಿಸಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.ಮದುವೆ ನಿಶ್ಚಯವಾಗಿದ್ದ ಜೋಡಿಯೊಂದು ತಮ್ಮ ನೆನಪಿಗಾಗಿ ವೃತ್ತಿಪರ ಕ್ಯಾಮೆರಾಮನ್ ತಂಡದೊಂದಿಗೆ ಫೋಟೋಶೂಟ್ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ನಾಲ್ಕೈದು ಸ್ಥಳೀಯ ಯುವಕರು, “ಇಲ್ಲಿ ಶೂಟಿಂಗ್ ಮಾಡಲು ಅನುಮತಿ ಯಾರು ಕೊಟ್ಟಿದ್ದು?” ಎಂದು ಗಲಾಟೆ ಆರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು, ಪುಂಡರು ಕ್ಯಾಮೆರಾಮನ್ ಮತ್ತು ಸಹಾಯಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಯ ವೇಳೆ ದುಬಾರಿ ಬೆಲೆಯ ಕ್ಯಾಮೆರಾ ಮತ್ತು ಲೆನ್ಸ್ ಸೇರಿದಂತೆ ಶೂಟಿಂಗ್ ಉಪಕರಣಗಳನ್ನು ಪುಂಡರು ಜಖಂಗೊಳಿಸಿದ್ದಾರೆ ಎಂದು ಸಂತ್ರಸ್ತರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯಿಂದ ಭಯಭೀತರಾದ ಮದುವೆ ಜೋಡಿಯು ಸ್ಥಳದಿಂದ ಕೂಡಲೇ ನಿರ್ಗಮಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಪಿಇಎಸ್ ವಿವಿಯ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದ ಪ್ರೊಫೆಸರ್ ಅಮಾನತು!
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೃಶ್ಯಾವಳಿಗಳ ಆಧಾರದ ಮೇಲೆ ಪುಂಡರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. “ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಪುಂಡಾಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

