ಚೆನ್ನೈ: ಪೌರ ಕಾರ್ಮಿಕ ಮಹಿಳೆಯೊಬ್ಬರು ರಸ್ತೆಯಲ್ಲಿ ಬಿದ್ದಿದ್ದ ಸುಮಾರು 45 ಲ. ರೂ. ಮೌಲ್ಯದ ಆಭರಣವನ್ನು ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಕಸ ಸಂಗ್ರಹಿಸುವ ವೇಳೆ ರಸ್ತೆ ಬದಿಯಲ್ಲಿ ಬಿದ್ದಿದ್ದ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ .
ಗ್ರೇಟರ್ ಚೆನ್ನೈ ಕಾರ್ಪೊರೇಷನ್ನಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಪದ್ಮಾ ಎಂಬ ಮಹಿಳೆ ಭಾನುವಾರ ಬೆಳಗ್ಗೆ ಟಿ.ನಗರದ ಮುಪ್ಪತ್ತಮ್ಮನ್ ಕೋವಿಲ್ ರಸ್ತೆಯಲ್ಲಿ ಕಸ ಗುಡಿಸುವ ಕೆಲಸದಲ್ಲಿ ತೊಡಗಿದ್ದಾಗ ರಸ್ತೆ ಬದಿಯಲ್ಲಿ ಬಿದ್ದಿದ್ದ ಒಂದು ಪ್ಲಾಸ್ಟಿಕ್ ಕವರ್ ಕಂಡು ಅನುಮಾನದಿಂದ ಅದನ್ನು ನೋಡಿದಾಗ ಚಿನ್ನದ ಆಭರಣಗಳಿರುವುದು ಕಂಡುಬಂದಿದೆ. ಇದರಿಂದ ಅಚ್ಚರಿಗೊಂಡ ಪದ್ಮಾ ತಕ್ಷಣವೇ ಪಾಂಡಿ ಬಜಾರ್ ಪೊಲೀಸ್ ಠಾಣೆಗೆ ತೆರಳಿ ಆ ಚೀಲವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ :Skin Infection : ಚರ್ಮದ ಸೋಂಕು: ಶ್ವಾನಕ್ಕೆ ಮೀನಿನ ಚರ್ಮ ಕಸಿ
ಪೊಲೀಸರು ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು ಸುಮಾರು 360 ಗ್ರಾಂ ಚಿನ್ನದ ಆಭರಣಗಳಿರುವುದು ಪತ್ತೆಯಾಗಿದೆ. ಇದೇ ಸಮಯದಲ್ಲಿ ನಂಗನಲ್ಲೂರು ನಿವಾಸಿ ರಮೇಶ್ ಎಂಬವರು ತಮ್ಮ 45 ಸವರನ್ ಅಂದರೆ 360 ಗ್ರಾಂ ಚಿನ್ನ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಹಳೆ ಚಿನ್ನದ ವ್ಯಾಪಾರಿಯಾಗಿರುವ ರಮೇಶ್, ಶನಿವಾರ ಸಂಜೆ ಟಿ.ನಗರಕ್ಕೆ ಸ್ನೇಹಿತನನ್ನು ಭೇಟಿಯಾಗಲು ಬಂದಾಗ ರಸ್ತೆ ಬದಿಯ ತಳ್ಳುಗಾಡಿಯ ಬಳಿ ಚಿನ್ನದ ಚೀಲವನ್ನು ಇಟ್ಟು ಮರೆತು ಹೋಗಿದ್ದರು. ಪೊಲೀಸರು ದೂರು ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿ, ರಮೇಶ್ ಅವರೇ ಚಿನ್ನದ ಅಸಲಿ ಮಾಲೀಕರು ಎಂದು ಖಚಿತಪಡಿಸಿಕೊಂಡು, ಬಂಗಾರದ ಆಭರಣಗಳನ್ನು ಅವರಿಗೆ ಹಸ್ತಾಂತರಿಸಿದರು.
ಪೌರಕಾರ್ಮಿಕ ಮಹಿಳೆ ಪದ್ಮಾ ಅವರ ಈ ಅಪರೂಪದ ಪ್ರಾಮಾಣಿಕತೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ಅವರ ನಿಷ್ಠೆಯನ್ನು ಗೌರವಿಸಿ, ಸ್ವತಃ ಮುಖ್ಯಮಂತ್ರಿಗಳೇ ಪದ್ಮಾ ಅವರನ್ನು ಸನ್ಮಾನಿಸಿದ್ದಾರೆ
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

