ಶಿವಮೊಗ್ಗ: ಪವಿತ್ರ ರಂಜಾನ್ ಮಾಸದ ಸಿದ್ಧತೆಗಳ ನಡುವೆಯೇ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ದೇಣಿಗೆ ಸಂಗ್ರಹದ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಹಿಂಸಾಚಾರಕ್ಕೆ ತಿರುಗಿದೆ. ಪಟ್ಟಣದ ಗಗ್ರಿ ಪ್ರದೇಶದಲ್ಲಿ ಪರಸ್ಪರ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ರಂಜಾನ್ ಹಬ್ಬದ ಸಿದ್ಧತೆಗಾಗಿ ಸ್ಥಳೀಯ ಮಸೀದಿಯಲ್ಲಿ ಸಭೆ ಕರೆಯಲಾಗಿತ್ತು. ಈ ವೇಳೆ ಪ್ರತಿ ಮುಸ್ಲಿಂ ಕುಟುಂಬದಿಂದ ತಲಾ 1,000 ರೂಪಾಯಿ ಕಡ್ಡಾಯ ದೇಣಿಗೆ ಸಂಗ್ರಹಿಸಲು ಒಂದು ಗುಂಪು ನಿರ್ಧರಿಸಿತು. ಆದರೆ, ಈ ನಿರ್ಧಾರಕ್ಕೆ ಮತ್ತೊಂದು ಗುಂಪು ತೀವ್ರ ವಿರೋಧ ವ್ಯಕ್ತಪಡಿಸಿತು. ಈ ಭಿನ್ನಾಭಿಪ್ರಾಯವು ಮಾತಿನ ಚಕಮಕಿಗೆ ಕಾರಣವಾಗಿ, ನಂತರ ಬೀದಿ ಕಾಳಗಕ್ಕೆ ತಿರುಗಿತು.

ಇದನ್ನೂ ಓದಿ: ಶಿವಮೊಗ್ಗ: ಸ್ಪೆಷಲ್ ಕ್ಲಾಸ್ ಬಳಿಕ ಸಹಪಾಠಿಯ ಭೀಕರ ಕೊಲೆ; ಅನ್ಯಕೋಮಿನ ಮೂವರು ವಿದ್ಯಾರ್ಥಿಗಳ ಬಂಧನ!
ಮಸೀದಿಯಿಂದ ಹೊರಬಂದ ಎರಡು ಗುಂಪುಗಳು ಶಿಕಾರಿಪುರ-ಶಿರಾಳಕೊಪ್ಪ ಮುಖ್ಯ ರಸ್ತೆಯಲ್ಲೇ ಪರಸ್ಪರ ಕಲ್ಲು ಮತ್ತು ಬಡಿಗೆಗಳಿಂದ ದಾಳಿ ನಡೆಸಿದವು. ರಸ್ತೆಯುದ್ದಕ್ಕೂ ಕಲ್ಲುಗಳು ಬಿದ್ದಿದ್ದರಿಂದ ವಾಹನ ಸವಾರರು ಆತಂಕಕ್ಕೊಳಗಾಗಿ ಸಂಚಾರ ಸ್ಥಗಿತಗೊಂಡಿತ್ತು. ಈ ಸಂಘರ್ಷದಲ್ಲಿ ಮೂರ್ನಾಲ್ಕು ಜನರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಶಿಕಾರಿಪುರ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 10 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

