ಗದಗ: ಮನೆ ನಿರ್ಮಾಣದ ಹಿನ್ನೆಲೆ ಪಂಚಾಂಗ ಹಾಕಲು ಭೂಮಿ ಅಗೆಯುವಾಗ ಅಪಾರ ಪ್ರಮಾಣದಲ್ಲಿ ಚಿನ್ನಾಭರಣಗಳು ಪತ್ತೆಯಾದ ಘಟನೆ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ. ಶನಿವಾರದಂದು ಭೂಮಿ ಅಗೆಯುವಾಗ ಕೆಲಸಗಾರರಿಗೆ ಚಿನ್ನಾಭರಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಭೂಮಿ ಅಗೆಯುತ್ತಿರುವಾಗ 8ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ರಿತ್ವಿಕ್ ಎಂಬವರು ತಾಮ್ರದ ಪಾತ್ರೆಯನ್ನು ನೋಡಿದ್ದರು, ಹೆಚ್ಚಿನ ಪರಿಶೀಲನೆ ವೇಳೆ ಆಭರಣಗಳು ಪತ್ತೆಯಾಗಿವೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ 470 ಗ್ರಾಂ ಚಿನ್ನಾಭರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಾಮ್ರದ ಪಾತ್ರೆಯಲ್ಲಿ ಹಾರ, ಕಿವಿಯೋಲೆ ಸೇರಿದಂತೆ ವಿವಿಧ ರೀತಿಯ ಆಭರಣಗಳಿದ್ದವು.

ಇದನ್ನೂ ಓದಿ: ಪರಶುರಾಮ ಥೀಮ್ ಪಾರ್ಕ್ನಲ್ಲಿ ತಾಮ್ರದ ಹೊದಿಕೆ ಕಳವು ಕೇಸ್: ಇಬ್ಬರ ಬಂಧನ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗದಗ ಎಸ್ಪಿ ರೋಹನ್ ಜಗದೀಶ್, “ತಾಮ್ರದ ಪಾತ್ರೆಯಲ್ಲಿ ಚಿನ್ನಾಭರಣಗಳಿರುವುದನ್ನು ನೋಡಿದ ಪ್ರಜ್ವಲ್, ಗ್ರಾಮದ ಹಿರಿಯ ಸದಸ್ಯರಿಗೆ ಪ್ರಾಮಾಣಿಕವಾಗಿ ಹೇಳಿದ. ಮಾಹಿತಿ ಸಿಕ್ಕ ಕೂಡಲೇ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮೌಲ್ಯಮಾಪಕರು ಸ್ಥಳಕ್ಕೆ ಭೇಟಿ ನೀಡಿದ್ದರು. ಅದರಲ್ಲಿದ್ದ 22 ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ” ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

