ಕಡಬದ ಸಬಲೂರು ಶಾಲೆ ಬಳಿ ಅಗ್ನಿ ಅವಘಡ: 7 ಎಕರೆ ಹುಲ್ಲು-ಗಿಡಗಳು ಭಸ್ಮ

ಕಡಬ: ತಾಲೂಕಿನ ಕ್ಯುಳ ಗ್ರಾಮದ ಸಬಲೂರು ಪ್ರದೇಶದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪ ಗುರುವಾರ ಬೆಂಕಿ ಅವಘಡ ಸಂಭವಿಸಿ, ದೊಡ್ಡ ಪ್ರದೇಶಕ್ಕೆ ವ್ಯಾಪಿಸಿಕೊಂಡು ಸುತ್ತಮುತ್ತಲಿನ ಗಿಡ-ಮರಗಳು ಹಾಗೂ ಹುಲ್ಲು ಸುಟ್ಟು ಭಸ್ಮವಾಗಿದೆ.

ಮೂಲಗಳ ಪ್ರಕಾರ, ಸಮೀಪದ ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬೆಂಕಿಯ ಜ್ವಾಲೆಗಳು ತ್ವರಿತವಾಗಿ ಶಾಲೆಯ ಸಮೀಪದ ಜಾಗಕ್ಕೆ ವ್ಯಾಪಿಸಿ ಒಣ ಹುಲ್ಲು, ಪೊದೆಗಳು ಸೇರಿದಂತೆ ಸಸ್ಯ ಸಂಪತ್ತು ಸುಟ್ಟುಹೋಗಿದ್ದು, ಆರಂಭಿಕ ಘಟನೆಯಲ್ಲಿ ಸುಮಾರು 2 ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

Advertisement

ಇದನ್ನೂ ಓದಿ: ದಕ್ಷಿಣ ಕನ್ನಡ, ಉಡುಪಿ ಸೇರಿ 15 ಜಿಲ್ಲೆಗಳಲ್ಲಿ ಗಾಳಿ, ಗುಡುಗು ಮಿಂಚು ಸಹಿತ ಮಳೆ, ಯೆಲ್ಲೋ ಅಲರ್ಟ್

ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಮತ್ತಷ್ಟು ವ್ಯಾಪಿಸದಂತೆ ನಿಯಂತ್ರಿಸಲು ಯಶಸ್ವಿಯಾದರು.

ಇದೇ ವೇಳೆ ಕ್ಯುಳ ಗ್ರಾಮದ ಕಲಾಯಿ ಹಾಗೂ ನೆಲ್ನೊಟ್ಟು ಪ್ರದೇಶದಲ್ಲಿಯೂ ಇದೇ ರೀತಿಯ ಬೆಂಕಿ ಘಟನೆಗಳು ವರದಿಯಾಗಿದ್ದು, ಒಟ್ಟು ಸುಮಾರು 7 ಎಕರೆ ವ್ಯಾಪ್ತಿಯಲ್ಲಿ ಹುಲ್ಲು ಹಾಗೂ ಸಸ್ಯ ಸಂಪತ್ತು ನಾಶವಾಗಿದೆ ಎನ್ನಲಾಗಿದೆ.

ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ನಂತರ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು