ಲಖ್ನೋ: ಉತ್ತರ ಪ್ರದೇಶದ ಮಥುರಾದಲ್ಲಿ ಗೋ ರಕ್ಷಕನ ಸಾವಿನ ಪ್ರಕರಣ ರಾಜ್ಯದಲ್ಲಿ ಉದ್ವಿಗ್ನತೆಗೆ ಕಾರಣವಾಗಿದ್ದು, ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಶಾಸಕ ರಾಜೇಶ್ ಚೌಧರಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, “ಧರ್ಮ ರಕ್ಷಣೆ ಮಾಡುತ್ತಿದ್ದ ಸಂತನೊಬ್ಬ ಜೀವ ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸಂಗತಿ. ಫರ್ಸಾ ಬಾಬಾ ಜನಪ್ರಿಯ ಸಂತರಾಗಿದ್ದರು. ಈ ಘಟನೆಗೆ ಕಾರಣರಾದವರನ್ನು ಸರ್ಕಾರ ಬಿಡುವುದಿಲ್ಲ” ಎಂದು ಹೇಳಿದರು.

ಈ ಪ್ರಕರಣಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಗಮನ ಹರಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಘಟನೆಯ ಹಿನ್ನಲೆ ಕುರಿತು ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಹೋಟೆಲ್ ಉದ್ಯಮಕ್ಕೆ ಕೇಂದ್ರದ ‘ಗ್ಯಾಸ್’ ಬೂಸ್ಟ್: ಸೋಮವಾರದಿಂದ ಶೇ. 20ರಷ್ಟು ಹೆಚ್ಚುವರಿ LPG ಪೂರೈಕೆ
ಇನ್ನೊಂದೆಡೆ, ಮಥುರಾದ ಕೋಸಿ ಪ್ರದೇಶದಲ್ಲಿ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ವೇಳೆ ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಘರ್ಷಣೆ ಸಂಭವಿಸಿದೆ. ಗೋ ಕಳ್ಳಸಾಗಣೆಗಾರರು ವಾಹನದಿಂದ ಡಿಕ್ಕಿ ಹೊಡೆದು ಗೋ ರಕ್ಷಕನನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.
ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅವರು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಘಟನೆ ಹಿನ್ನೆಲೆ
ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವಿಚಾರ ತಿಳಿದ ಗೋರಕ್ಷಕ ಚಂದ್ರಶೇಖರ್ ಅಲಿಯಾಸ್ ಫರ್ಸಾ ವಾಲೆ ಬಾಬಾ ಅವರು ಬೈಕ್ ಮೂಲಕ ಬೆನ್ನಟ್ಟಿ ಟ್ರಕ್ ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಮಥುರಾ ಜಿಲ್ಲೆಯ ನವಿಪುರ ಗ್ರಾಮದ ಬಳಿ ಟ್ರಕ್ ತಡೆಯಲು ಯತ್ನಿಸಿ ಬಾಬಾರ ಮೇಲೆ ನಾಲ್ವರು ಆರೋಪಿಗಳು ಟ್ರಕ್ ಹತ್ತಿಸಿ ಹತ್ಯೆಗೈದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈದ್ ಹಬ್ಬದ ನಡುವೆಯೇ ಹತ್ಯೆ ನಡೆದಿದ್ದು, ಮಥುರಾದ ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಉದ್ರಿಕ್ತ ಭಕ್ತರು ಮತ್ತು ಗ್ರಾಮಸ್ಥರು ಭಾರಿ ಪ್ರತಿಭಟನೆ ಹಾಗೂ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಅಶ್ರವಾಯು ಪ್ರಯೋಗಿಸಿ, ಲಾಠಿಚಾರ್ಜ್ ಮಾಡಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

