ಚಿಕ್ಕಮಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ನಿರ್ಧರಿಸಿದ ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರ ಅಂಕಿತ ಇನ್ನೂ ಬಿದ್ದಿಲ್ಲ. ಆದರೆ, ಜಾರಿಗೂ ಮುನ್ನ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಬಿಜೆಪಿ ಮುಖಂಡ ವಿಕಾಸ್ ಪಿ. ಅವರಿಗೆ ದ್ವೇಷ ಭಾಷಣ ಮಸೂದೆಯಡಿ ನೋಟಿಸ್ ಜಾರಿ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.
ಚಿಕ್ಕಮಗಳೂರಿನ ತರೀಕೆರೆಯಲ್ಲಿ ಜ.24 ರಂದು ಚಿಕ್ಕಮಗಳೂರಿನಲ್ಲಿ ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಮತ್ತು ತರಿಕೆರೆ ರಂಗಮಂದಿರದಲ್ಲಿ ಸಾರ್ವಜನಿಕ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ವಿಕಾಸ್ ಪಿ. ಅವರು ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದರು.

ಇದಕ್ಕೂ ಮುನ್ನ ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ವಿಕಾಸ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅನ್ಯಕೋಮಿನ ಸಮುದಾಯದವರ ಭಾವನೆಗೆ ದಕ್ಕೆ ಉಂಟಾದರೆ, ದ್ವೇಷ ಭಾಷಣ ಮಾಡಿದರೆ, ಹಿಂಸೆಗೆ ಪ್ರಚೋದನೆ ನೀಡಿದರೆ ದ್ವೇಷ ಭಾಷಣ ಮಸೂದೆ-2025ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ: ರಾಜ್ಯಪಾಲರು ಓದದೆ ಬಿಟ್ಟ ಭಾಷಣವನ್ನು ಹಂಚಿಕೊಂಡ ಸಿಎಂ ಸಿದ್ದರಾಮಯ್ಯ
ಈ ಬಗ್ಗೆ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ವಿಕಾಸ್, ಚಿಕ್ಕಮಗಳೂರಿನ ತರೀಕೆರೆಯಲ್ಲಿ ಇಂದು ಹಿಂದೂ ಸಮಾಜೋತ್ಸವದಲ್ಲಿ ನನ್ನ ಭಾಷಣವಿತ್ತು. ಭಾಷಣದ ಮೊದಲೇ ಬಂದ ಅಲ್ಲಿನ ಗೌರವಾನ್ವಿತ ಪೊಲೀಸರು ದ್ವೇಶ ಭಾಷಣ ಮಸೂದೆ – 2025ರನ್ನು ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ನೋಟೀಸ್ ನೀಡಿದ್ದಾರೆ. ಅದು ಜಾರಿ ಆಗಿಲ್ಲ. ಹೀಗಿರುವಾಗ ಈ ನೋಟಿಸ್ ನೀಡಲು ಪೊಲೀಸರಿಗೆ ಅವಕಾಶವಿದೆಯೇ? ಈ ಸರಕಾರಕ್ಕೆ ಯಾಕಿಷ್ಟು ದ್ವೇಷ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ
ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ನಡೆಯನ್ನು ಖಂಡಿಸಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ರಾಜ್ಯದಲ್ಲಿ ರಾಜ್ಯಪಾಲರು ಯಾವರೀತಿ ಭಾಷಣ ಮಾಡಬೇಕೆಂದು ಸರ್ಕಾರದ ಮಂತ್ರಿಗಳು ಹೇಳಬೇಕಂತೆ ಮತ್ತು ಹಿಂದೂ ನಾಯಕರು ಯಾವರೀತಿ ಭಾಷಣ ಮಾಡಬೇಕೆಂದು ಪೊಲೀಸರು ಹೇಳಬೇಕಂತೆ. ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಪಕ್ಷದ ಕಾರ್ಯಕರ್ತರಾದ ಶ್ರೀ ವಿಕಾಸ್ ಪುತ್ತೂರು ಅವರ ಮೇಲೆ ಈ ರೀತಿ ಇಲ್ಲದ ಕಾನೂನಿನ ಅಸ್ತ್ರ ಪ್ರಯೋಗಿಸುತ್ತಿರುವುದು ಪ್ರಜಾಪ್ರಭುತ್ವದ ಮೇಲಿನ ಸವಾರಿ. ವಿಕಾಸ್ ಪುತ್ತೂರು ರವರಿಗೆ ನೀಡಿದ ಷರತ್ತಿನ ಪತ್ರದಂತೆ ಇತರೆ ವರ್ಗದ ನಾಯಕರು ಅಥವಾ ಕಾಂಗ್ರೆಸ್ ನಾಯಕರಿಗೆ ನೀಡಿರುವ ಬಗ್ಗೆ ಪೊಲೀಸರು ಮಾಹಿತಿ ಕೊಡಲಿ ಎಂದರು.
ಇದನ್ನೂ ಓದಿ: ಎರಡು ಲೈನ್ ಭಾಷಣ ಮಾಡಿದ ಕರ್ನಾಟಕ ರಾಜ್ಯಪಾಲ ಗೆಹ್ಲೋಟ್
ಸಮಾವೇಶದಲ್ಲಿ ಬಾಷಣ ಮಾಡುವವರನ್ನು ಜೈಲಿಗಟ್ಟುವ ಅಥವಾ ನೋಟಿಸ್ ನೀಡಿ ಬೆದರಿಸುವ ಹಳೆ ಚಾಳಿಯನ್ನು ಕಾಂಗ್ರೆಸ್ ಸರ್ಕಾರ ಮತ್ತೆ ಶುರು ಮಾಡಿದೆ. ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ತನ್ನ ವೈಯಕ್ತಿಕ ಸೇನೆಯಂತೆ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದರು.
ಪೊಲೀಸರು ತಮ್ಮ ಪತ್ರದಲ್ಲಿ ದ್ವೇಷ ಭಾಷಣ ಮಸೂದೆ ಎಂದು ನಮೂದಿಸಿದ್ದಾರೆ. ಯಾವ ಮಸೂದೆ? ರಾಜ್ಯಪಾಲರು ಇನ್ನೂ ಅಂಕಿತ ಹಾಕದಿರುವಾಗ ಮಸೂದೆ ಹೇಗಾಗುತ್ತದೆ ಮತ್ತು ಅದರನ್ವಯ ಹೇಗೆ ಕೇಸು ಹಾಕುತ್ತೀರಿ. ಈ ರೀತಿ ಬೆದರಿಸುವ ತಂತ್ರ ಹೆಣೆದರೆ ಸಂಘರ್ಷದಿಂದಲೇ ಬೆಳೆದು ಬಂದ ನಮಗೆ ಉತ್ತರ ಕೊಡಲೂ ಗೊತ್ತಿದೆ ಎಂಬುದನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

