ಬೆಂಗಳೂರು: ಕಿರುತೆರೆಯ ಜನಪ್ರಿಯ ಗಾಯಕಿ ಮತ್ತು ನಿರೂಪಕಿ ಅಖಿಲಾ ಪಜಿಮಣ್ಣು ಅವರು ತಮ್ಮ ಪತಿ ಧನಂಜಯ್ ಶರ್ಮಾ ಅವರಿಂದ ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿತ್ತು. ಈಗ ಸ್ವತಃ ಅಖಿಲಾ ಅವರೇ ಈ ಕುರಿತು ಮೌನ ಮುರಿದಿದ್ದು, ತಮ್ಮ ಈ ನಿರ್ಧಾರದ ಹಿಂದಿನ ಕಾರಣಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ದಿ ಪವರ್ ಹೌಸ್ ವೈನ್ಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಖಿಲಾ ಪಜಿಮಣ್ಣು ಮತ್ತು ಧನಂಜಯ್ ಅವರದ್ದು ಹಿರಿಯರು ನಿಶ್ಚಯಿಸಿದ ವಿವಾಹವಾಗಿತ್ತು (Arranged Marriage). ವಿವಾಹದ ನಂತರ ಅವರು ಅಮೆರಿಕದಲ್ಲಿ ವಾಸವಾಗಿದ್ದರು. ಆದರೆ, ಅವರ ನಡುವೆ ಹೊಂದಾಣಿಕೆಯ ಸಮಸ್ಯೆ ಎದುರಾಗಿತ್ತು ಎಂದು ಅವರು ತಿಳಿಸಿದ್ದಾರೆ.
ನಾವಿಬ್ಬರೂ ಈ ದಾಂಪತ್ಯವನ್ನು ಉಳಿಸಿಕೊಳ್ಳಲು ಸುಮಾರು ಒಂದೂವರೆ ವರ್ಷಗಳ ಕಾಲ ಪ್ರಾಮಾಣಿಕವಾಗಿ ಪ್ರಯತ್ನಿಸಿದೆವು. ಆದರೆ ನಮ್ಮಿಬ್ಬರ ನಡುವೆ ಸಮನ್ವಯತೆ ಸಾಧ್ಯವಾಗಲಿಲ್ಲ,” ಎಂದು ಅಖಿಲಾ ಹೇಳಿದ್ದಾರೆ. ಇದು ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರವಲ್ಲ. ಇಬ್ಬರೂ ಚರ್ಚಿಸಿ, ಪರಸ್ಪರರ ನೆಮ್ಮದಿಗಾಗಿ ಗೌರವಯುತವಾಗಿ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ: ಇಂದು ಚಿನ್ನದ ದರ ಇಳಿಕೆ!
ಇಲ್ಲಿದೆ ನೋಡಿ ವಿಡಿಯೋ:
ತಮ್ಮ ವೈಯಕ್ತಿಕ ನಿರ್ಧಾರಕ್ಕೂ ಮತ್ತು ವೃತ್ತಿಜೀವನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಕಷ್ಟದ ಸಮಯದಲ್ಲಿ ಕುಟುಂಬದವರು ತಮಗೆ ಬೆನ್ನೆಲುಬಾಗಿ ನಿಂತಿದ್ದನ್ನು ಅವರು ಸ್ಮರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ಸ್ವತಂತ್ರವಾಗಿ ನೆಮ್ಮದಿಯ ಬದುಕು ನಡೆಸಲು ಬಯಸಿರುವ ಅಖಿಲಾ, ಸದ್ಯ ತಮ್ಮ ಸಂಗೀತ ವೃತ್ತಿಯತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

