ದೆಹಲಿ: ರಾಜ್ಯಸಭೆಯಲ್ಲಿ ಇಂದು ಭಾವನಾತ್ಮಕ ಮತ್ತು ವಿನೋದಭರಿತ ವಾತಾವರಣ ನಿರ್ಮಾಣವಾಗಿತ್ತು. ನಿವೃತ್ತರಾಗುತ್ತಿರುವ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ. ದೇವೇಗೌಡ ಮತ್ತು ಪ್ರಧಾನಿ ಮೋದಿ ಅವರ ಮೈತ್ರಿಯನ್ನು ಅತ್ಯಂತ ಚತುರತೆಯಿಂದ ವ್ಯಂಗ್ಯವಾಡಿದರು.”ನಾನು ದೇವೇಗೌಡರನ್ನು ಕಳೆದ 54 ವರ್ಷಗಳಿಂದ ಬಲ್ಲೆ. ಅವರೊಂದಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ ಇತ್ತೀಚೆಗೆ ಏನಾಯಿತೋ ಗೊತ್ತಿಲ್ಲ” ಎಂದು ಮಾತು ಆರಂಭಿಸಿದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯನ್ನು ಉಲ್ಲೇಖಿಸಿದ ಖರ್ಗೆ, “ಅವರು ಮೊದಲು ನಮ್ಮನ್ನು ಪ್ರೇಮಿಸಿದರು (ಕಾಂಗ್ರೆಸ್ ಜೊತೆಗಿನ ಮೈತ್ರಿ), ಆದರೆ ಕೊನೆಗೆ ಮದುವೆಯಾಗಿದ್ದು ಮಾತ್ರ ಮೋದಿ ಅವರನ್ನೇ!” ಎಂದು ಹಾಸ್ಯ ಚಟಾಕಿ ಹಾರಿಸಿದರು. ಖರ್ಗೆ ಅವರ ಈ ಮಾತನ್ನು ಕೇಳಿ ಸದನದಲ್ಲೇ ಇದ್ದ ಪ್ರಧಾನಿ ನರೇಂದ್ರ ಮೋದಿ ಅವರು ಜೋರಾಗಿ ನಗುತ್ತಾ ಆನಂದಿಸಿದರು.

ಇದನ್ನೂ ಓದಿ: ರಾಜ್ಯಸಭೆ ಸದಸ್ಯರಿಗೆ ಪ್ರಧಾನಿ ಮೋದಿ ಭಾವುಕ ಬೀಳ್ಕೊಡುಗೆ: “ಅನುಭವವು ಮುಂದಿನ ಪೀಳಿಗೆಗೆ ದಾರಿದೀಪ”
ರಾಜಕೀಯ ಮತ್ತು ಸಾರ್ವಜನಿಕ ಬದುಕಿನಲ್ಲಿರುವವರಿಗೆ ನಿವೃತ್ತಿ ಎಂಬುದು ಇರುವುದಿಲ್ಲ. ದೇಶಸೇವೆ ಮಾಡುವ ಉತ್ಸಾಹ ಎಂದಿಗೂ ಕುಂದುವುದಿಲ್ಲ ಎಂದು ಖರ್ಗೆ ಅಭಿಪ್ರಾಯಪಟ್ಟರು. ಪ್ರಧಾನಿ ಮೋದಿ ಅವರು ಕೂಡ ತಮ್ಮ ಭಾಷಣದಲ್ಲಿ ಹಿರಿಯ ನಾಯಕರನ್ನು ಸ್ಮರಿಸಿದರು. “ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಮತ್ತು ಶರದ್ ಪವಾರ್ ಅವರು ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಸಂಸದೀಯ ಕೆಲಸಕ್ಕಾಗಿ ಮೀಸಲಿಟ್ಟಿದ್ದಾರೆ.””ಹೊಸದಾಗಿ ಆಯ್ಕೆಯಾಗಿ ಬರುವ ಸಂಸದರು ಈ ಹಿರಿಯ ನಾಯಕರ ಕಾರ್ಯವೈಖರಿ ಮತ್ತು ಶಿಸ್ತಿನಿಂದ ಬಹಳಷ್ಟು ಕಲಿಯಬೇಕಿದೆ” ಎಂದು ಮೋದಿ ಸಲಹೆ ನೀಡಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

