ಮಂಗಳೂರು: ಉಳ್ಳಾಲ ತಾಲೂಕಿನ ಕುತಾರ್ ಪದವಿನ್ನ ಸಲಾತ್ ನಗರದಲ್ಲಿ ಶುಕ್ರವಾರ ಸಂಜೆ ನಡೆದ ದುರಂತದಲ್ಲಿ ವಲಸೆ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಲ್ಲಾಪುರ ಮೂಲದ ಶಿವಕುಮಾರ್ ಜಿ.ಕೆ (30) ಮೃತಪಟ್ಟವರು.
ಶುಕ್ರವಾರ ಸಂಜೆ ಸುಮಾರು 4.30ರ ವೇಳೆಗೆ ಬಾವಿ ತೋಡುವ ಕಾಮಗಾರಿ ನಡೆಯುತ್ತಿತ್ತು. ಆ ವೇಳೆ ಸುಮಾರು 30 ಅಡಿ ಆಳದ ಬಾವಿಯೊಳಗೆ ಶಿವಕುಮಾರ್ ಸೇರಿದಂತೆ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕ್ರೇನ್ ಮೂಲಕ ಮಣ್ಣನ್ನು ಮೇಲಕ್ಕೆತ್ತುವಾಗ ಕಬ್ಬಿಣದ ಬಕೆಟ್ ಹೂಕಿನಿಂದ ಜಾರಿ ಬಿದ್ದು ನೇರವಾಗಿ ಶಿವಕುಮಾರ್ ಅವರ ತಲೆಗೆ ಬಿದ್ದಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಕ್ಯಾನ್ಸರ್ ಪ್ರಕರಣಗಳ ಏರಿಕೆ: ಒಂದೇ ವರ್ಷದಲ್ಲಿ ದಾಖಲಾದ ಪ್ರಕರಣಗಳೆಷ್ಟು ಗೊತ್ತಾ?
ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಹೊರತೆಗೆದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಬಾವಿಯೊಳಗಿದ್ದ ಇನ್ನಿಬ್ಬರು ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಕುಮಾರ್ ಅವರು ಪತ್ನಿ, ಮೂವರು ವರ್ಷದ ಮಗ ಮತ್ತು ಒಂದು ವರ್ಷದ ಮಗಳನ್ನು ಅಗಲಿದ್ದಾರೆ. ಅವರು ಥೊಕ್ಕೊಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಗುರುವಾರವೇ ಪತ್ನಿ ಮತ್ತು ಮಕ್ಕಳನ್ನು ಊರಿಗೆ ಕಳುಹಿಸಿದ್ದರು. ಶಿವಕುಮಾರ್ ಅವರು ಎರಡು ವಾರಗಳ ಹಿಂದಷ್ಟೇ ತಮ್ಮ ಮಗಳ ಮೊದಲ ಹುಟ್ಟುಹಬ್ಬವನ್ನು ಆಚರಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

