ನವದೆಹಲಿ: ರಕ್ಷಣಾ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ತನ್ನ ಅಧಿಕೃತ ಪ್ರವಾಸದ ಭಾಗವಾಗಿ ಜ.23 ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದು, ಈ ಸಮಯದಲ್ಲಿ ಸದಸ್ಯರು ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವ ನಿರೀಕ್ಷೆಯಿದೆ. ಈ ಭೇಟಿಯು ವಾರಣಾಸಿಯನ್ನು ಒಳಗೊಂಡಂತೆ ವ್ಯಾಪಕ ಪರಿಶೀಲನಾ ಪ್ರವಾಸದ ಭಾಗವಾಗಿದೆ. ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಸಮಿತಿಯ ಸದಸ್ಯರಾಗಿದ್ದು, ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಭೇಟಿ ನೀಡುತ್ತಾರಾ ಎಂಬ ಕುತೂಹಲ ಕೆರಳಸಿದೆ.
ಮೂಲಗಳ ಪ್ರಕಾರ, ರಕ್ಷಣಾ ಸಮಿತಿಯು ತನ್ನ ನಿಗದಿತ ಪರಿಶೀಲನೆಯ ಭಾಗವಾಗಿ ಮೊದಲು ವಾರಣಾಸಿಯ ಸೇನಾ ಕಂಟೋನ್ಮೆಂಟ್ಗೆ ಭೇಟಿ ನೀಡಲಿದೆ. ನಂತರ, ಅಯೋಧ್ಯೆಗೆ ಪ್ರಯಾಣಿಸುವ ನಿರೀಕ್ಷೆಯಿದೆ, ಅಲ್ಲಿ ಸದಸ್ಯರು ರಾಮ ಮಂದಿರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ದೇವಾಲಯದ ವಾರ್ಷಿಕೋತ್ಸವದ ಪ್ರಯುಕ್ತ ಅಯೋಧ್ಯೆಗೆ ಭೇಟಿ
ಮೂಲಗಳು ಸೂಚಿಸುವಂತೆ, ಸಮಿತಿಯ ಅಯೋಧ್ಯಾ ಭೇಟಿ ಜನವರಿ 22 ಅಥವಾ 23 ರಂದು ನಡೆಯಬಹುದು. ಜನವರಿ 22 ರಂದು 2024 ರಲ್ಲಿ ನಡೆದ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವಾರು ಪ್ರಮುಖ ಗಣ್ಯರ ಸಮ್ಮುಖದಲ್ಲಿ ರಾಮಲಲ್ಲಾ ವಿಗ್ರಹವನ್ನು ಸ್ಥಾಪಿಸಲಾಗಿತ್ತು.
ಇದನ್ನೂ ಓದಿ: ‘ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ’, ಡಿ.ಕೆ.ಶಿ ಪೋಸ್ಟ್
ರಾಹುಲ್ ಗಾಂಧಿ ದೇವಸ್ಥಾನ ಭೇಟಿಯಲ್ಲಿ ಭಾಗವಹಿಸುವ ಸಾಧ್ಯತೆ ರಾಜಕೀಯವಾಗಿ ಗಮನ ಸೆಳೆದಿದೆ. ಕಳೆದ ವರ್ಷ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭದಲ್ಲಿ ಅವರು ಭಾಗವಹಿಸಿರಲಿಲ್ಲ. ಈ ಬಗ್ಗೆ ಬಿಜೆಪಿಯಿಂದ ಟೀಕೆ ವ್ಯಕ್ತವಾಗಿತ್ತು ಮತ್ತು ತುಷ್ಟೀಕರಣ ರಾಜಕೀಯದ ಆರೋಪಗಳಿಗೆ ಕಾರಣವಾಗಿತ್ತು. ಈ ಬಾರಿ ಅವರು ಸಮಿತಿಯೊಂದಿಗೆ ಅಯೋಧ್ಯೆಗೆ ಹೋಗುತ್ತಾರೆಯೇ ಎಂಬುದು ಖಚಿತವಿಲ್ಲ.
ದೇವಸ್ಥಾನ ಭೇಟಿ ಕುರಿತು ಗಿರಿರಾಜ್ ಸಿಂಗ್ ಹೇಳಿಕೆ
ರಾಹುಲ್ ಗಾಂಧಿ ರಾಮ ಮಂದಿರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂಬ ವರದಿಗಳ ಬಗ್ಗೆ ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ನಂಬಿಕೆ ಮತ್ತು ಆತ್ಮಾವಲೋಕನಕ್ಕಾಗಿ ದೇವಸ್ಥಾನಕ್ಕೆ ಭೇಟಿ ನೀಡಬೇಕು. ರಾಜಕೀಯವಾಗಿ ಅಲ್ಲ ಎಂದು ಹೇಳಿದರು.
ಇದಕ್ಕೂ ಮೊದಲು, ಬಾರಾಬಂಕಿಯ ಕಾಂಗ್ರೆಸ್ ಸಂಸದ ತನುಜ್ ಪೂನಿಯಾ ಕೂಡ ರಾಹುಲ್ ಗಾಂಧಿ ಶೀಘ್ರದಲ್ಲೇ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

