ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಫಲ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಕೇರಳದ ಕೊಚ್ಚಿಯಲ್ಲಿ ಖಚಿತ ಮಾಹಿತಿ ಆಧರಿಸಿ ಭರ್ಜರಿ ಕಾರ್ಯಾಚರಣೆ ನಡೆಸಿದ ಎನ್ಐಎ ಅಧಿಕಾರಿಗಳು, ಪರಾರಿಯಾಗಿದ್ದ ಆರೋಪಿ ಉಮ್ಮರ್ ಫಾರೂಕ್ ಎಂ.ಆರ್. ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಉಮ್ಮರ್ ಫಾರೂಕ್ ವಿರುದ್ಧ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ (NBW) ಹಾಗೂ ಇಂಟರ್ಪೋಲ್ ಮೂಲಕ ‘ರೆಡ್ ಕಾರ್ನರ್ ನೋಟಿಸ್’ ಹೊರಡಿಸಲಾಗಿತ್ತು. ಈತನ ಸುಳಿವು ನೀಡಿದವರಿಗೆ ಎನ್ಐಎ 4 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.
ನಿಷೇಧಿತ ಪಿಎಫ್ಐ (PFI) ಕಚೇರಿಯಲ್ಲಿ ನಡೆದ ಹತ್ಯೆಯ ಸಂಚು ಸಭೆಯಲ್ಲಿ ಈತ ಭಾಗಿಯಾಗಿದ್ದ. ಪ್ರವೀಣ್ ನೆಟ್ಟಾರು ಹತ್ಯೆಗೂ ಮುನ್ನ ಸ್ಥಳ ಪರಿಶೀಲನೆಗೆ (ರೆಕ್ಕಿ) ಬೈಕ್ ಒದಗಿಸಿಕೊಟ್ಟಿದ್ದಲ್ಲದೆ, ಬಳಿಕ ಪ್ರಕರಣದ ಸಾಕ್ಷಿದಾರನ ಹತ್ಯೆಗೂ ಯತ್ನಿಸಿದ್ದ ಎಂಬ ಗಂಭೀರ ಆರೋಪಗಳಿವೆ.
2022ರಲ್ಲಿ ನಡೆದ ಈ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಇದುವರೆಗೆ ಒಟ್ಟು 25 ಆರೋಪಿಗಳನ್ನು ಬಂಧಿಸಿದಂತಾಗಿದೆ. ಪ್ರಕರಣದಲ್ಲಿ ಇನ್ನೂ ಇಬ್ಬರು ಮುಖ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಎನ್ಐಎ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದೆ.

