ಇಂದು ಭೀಮನ ಅಮಾವಾಸ್ಯೆಯಾಗಿದ್ದು, ಕರಾವಳಿ ಹಾಗೂ ತುಳುನಾಡಿನಲ್ಲಿ ಇದನ್ನು ಅತ್ಯಂತ ಸಂಭ್ರಮ ಹಾಗೂ ಶ್ರದ್ಧೆಯಿಂದ ‘ಆಟಿ ಅಮಾವಾಸ್ಯೆ’ (ಆಟಿ ಅಮಾಸೆ) ಎಂದೇ ಆಚರಿಸಲಾಗುತ್ತದೆ. ತಲೆತಲಾಂತರಗಳಿಂದ ನಡೆದುಬಂದಿರುವ ಈ ಜಾನಪದ ಹಾಗೂ ಆಯುರ್ವೇದೀಯ ಮಹತ್ವದ ದಿನದಂದು ಪ್ರತಿಯೊಬ್ಬ ತುಳುವರ ಮನೆಯಲ್ಲಿ ಪಾಲೆ ಮರದ ತೊಗಟೆಯ ಕಷಾಯ ಕುಡಿಯುವ ಅಪೂರ್ವ ಪದ್ಧತಿ ಇಂದಿಗೂ ಜಾರಿಯಲ್ಲಿದೆ.
ಆಟಿ ಅಮಾವಾಸ್ಯೆಯ ದಿನ ಸೂರ್ಯೋದಯಕ್ಕೂ ಮುನ್ನವೇ ಪಾಲೆ ಮರದ (ಹಾಲೆ ಮರ/ಸಪ್ತಪರ್ಣಿ ಮರ) ತೊಗಟೆಯನ್ನು ತೆಗೆಯುವುದು ಈ ಆಚರಣೆಯ ಪ್ರಮುಖ ಭಾಗ. ಮುಂಜಾನೆ 4 ಗಂಟೆಗೆಲ್ಲ ಮನೆಯ ಹಿರಿಯರು ಕಲ್ಲಿನಿಂದ ಜಜ್ಜಿ ಪಾಲೆ ಮರದ ತೊಗಟೆಯನ್ನು ತರುತ್ತಾರೆ. ಬಳಿಕ ಅದನ್ನು ಜಜ್ಜಿ, ರಸ ಹಿಂಡಿ, ಬೆಳ್ಳುಳ್ಳಿ, ಓಮ, ಜೀರಿಗೆ, ಮೆಣಸು ಮುಂತಾದ ಔಷಧೀಯ ದ್ರವ್ಯಗಳನ್ನು ಸೇರಿಸಿ ಕಷಾಯ ಸಿದ್ಧಪಡಿಸಲಾಗುತ್ತದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಕಾಡುತ್ತಿದೆಯೇ ವಸಡಿನ ರಕ್ತಸ್ರಾವ, ಬಾಯಿ ದುರ್ವಾಸನೆ?: ಕಾರಣ ನಿಮ್ಮ ಈ ಹವ್ಯಾಸಗಳೇ ಇರಬಹುದು
ಈ ದಿನ ಮಾತ್ರವೇ ಪಾಲೆ ಮರದ ತೊಗಟೆಯಲ್ಲಿ ಸಾಲು ಸಾಲು ಆಯುರ್ವೇದೀಯ ಗುಣಗಳು ತುಂಬಿರುತ್ತವೆ ಎಂಬ ಬಲವಾದ ನಂಬಿಕೆ ಇದೆ. ಈ ಕಷಾಯ ಕುಡಿಯುವುದರಿಂದ ದೇಹದಲ್ಲಿರುವ ಎಲ್ಲಾ ರೀತಿಯ ನಂಜು ಹಾಗೂ ರೋಗಾಣುಗಳು ನಾಶವಾಗುತ್ತವೆ ಎಂಬುದು ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಸತ್ಯ. ಮುಂಜಾನೆ ಕಷಾಯ ಕುಡಿದ ತಕ್ಷಣ ಕಹಿ ನಾಲಿಗೆಯನ್ನು ಸರಿಪಡಿಸಲು ಹಾಗೂ ದೇಹಕ್ಕೆ ಶಕ್ತಿ ನೀಡಲು ಸುಟ್ಟ ಗೇರುಬೀಜಗಳನ್ನು (ಗೋಡಂಬಿ) ತಿನ್ನುವ ಪರಿಪಾಠವಿದೆ.
ಕಷಾಯದ ಕಟು ತೀವ್ರತೆಯನ್ನು ಸಮತೋಲನಗೊಳಿಸಲು ಹಾಗೂ ದೇಹವನ್ನು ತಂಪಾಗಿಸಲು ಮಧ್ಯಾಹ್ನ ಮೆಂತೆ ಹಾಗೂ ಬೆಲ್ಲ ಸೇರಿಸಿ ಮಾಡಿದ ಬಿಸಿಯಾದ ‘ಮೆಂತೆ ಗಂಜಿ’ ಉಣ್ಣಲಾಗುತ್ತದೆ. ಇಂದಿಗೂ ಕರಾವಳಿಯ ಮನೆಗಳಲ್ಲಿ ಕಡ್ಡಾಯವಾಗಿ ಈ ಕಷಾಯ ಕುಡಿಯಲಾಗುತ್ತದೆ. ಹಲವು ದೇವಸ್ಥಾನಗಳು, ಸಂಘ-ಸಂಸ್ಥೆಗಳು ಹಾಗೂ ಸಾಂಸ್ಕೃತಿಕ ವೇದಿಕೆಗಳ ಮೂಲಕ ಸಾರ್ವಜನಿಕರಿಗಾಗಿ ಸಾಮೂಹಿಕ ಕಷಾಯ ವಿತರಣೆಯನ್ನೂ ಆಯೋಜಿಸಲಾಗಿದೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

