ಬಂಟ್ವಾಳ: ಕೇವಲ ವಾಲಿಬಾಲ್, ತ್ರೋಬಾಲ್ ಮಾತ್ರವಲ್ಲದೆ ಮಡಕೆ ಒಡೆಯುವುದು, ಹಿಮ್ಮುಖ ಓಟ, ಬಾಳೆಗಿಡ ಏರುವುದು, ಚಮಚದಲ್ಲಿ ಲಿಂಬೆ ಹಿಡಿದು ಓಡುವುದು ಸೇರಿದಂತೆ ಹಲವು ಮಜಾದಾಯಕ ಸಾಂಪ್ರದಾಯಿಕ ಆಟಗಳು ಒಂದೇ ವೇದಿಕೆಯಲ್ಲಿ ನಡೆಯಲಿವೆ.
ತಾಲೂಕಿನ ಮಂಚಿ ಗ್ರಾಮದ ಮೋಂತಿಮಾರಿನ ಬಾಲಾವಲಿಕಾರ್/ರಾಜಾಪುರ ಸಾರಸ್ವಾತ ಸಮಾಜ ಸೇವಾ ಸಂಘದ ವತಿಯಿಂದ ಸ್ವಸಮಾಜ ಬಾಂಧವರಿಗಾಗಿ 3ನೇ ವರ್ಷದ ‘ಗಾದೆಂತ್ ಖೇಳ್ ಖೇಳಯಾ’ ಎಂಬ ಒಂದು ದಿನದ ಕ್ರೀಡಾಕೂಟವು ಆ.23ರಂದು ನೂಜಿ ಜಯದೇವ ಭಟ್ ಅವರ ಗದ್ದೆಯಲ್ಲಿ ಆಯೋಜಿಸಲಾಗಿದೆ.
ಇದನ್ನೂ ಓದಿ: ಮೋಂತಿಮಾರಿನಲ್ಲಿ ಉಚಿತ ಸೇವಾ ಶಿಬಿರ ಹಾಗೂ ವನಮಹೋತ್ಸವ: 350ಕ್ಕೂ ಹೆಚ್ಚು ಜನ ಭಾಗಿ, ಯಶಸ್ವಿ ಮುಕ್ತಾಯ
ಪುರುಷರಿಗಾಗಿ ವಾಲೀಬಾಲ್, ಹಗ್ಗಜಗ್ಗಾಟ, ಓಟ, ಮಡಕೆ ಒಡೆಯುವುದು, ಹಿಮ್ಮುಖ ಓಟ ಸ್ಪರ್ಧೆ ಇರಲಿದೆ. ಮಹಿಳೆಯರಿಗಾಗಿ ತ್ರೋಬಾಲ್, ಹಗ್ಗಜಗ್ಗಾಟ, ಓಟ, ಮಡಕೆ ಒಡೆಯುವುದು, ಹಿಮ್ಮುಖ ಓಟ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳಿಗಾಗಿ ಅಡ್ಡ ಜಾರುಕಂಬ, ಬಾಳೆಗಿಡ ಏರುವುದು, ಚಮಚ ಲಿಂಬೆ ಓಟ, ಓಟ, ರಿಂಗ್ ಎಸೆತ ಸ್ಪರ್ಧೆ ಏರ್ಪಡಿಸಲಾಗಿದೆ.
ದಂಪತಿಗಳಿಗಾಗಿ ರಿಲೆ ಓಟ, ಉಪ್ಪಿನ ಗೋಣಿ ಓಟ ಸ್ಪರ್ಧೆ ಏರ್ಪಡಿಸಲಾಗಿದೆ. 50 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರಿಗಾಗಿ ಬಾಲ್ ಪಾಸಿಂಗ್, ರಿಂಗ್ ಎಸೆತ ಸ್ಪರ್ಧೆ ಆಯೋಜಿಸಲಾಗಿದೆ.
ಬೆಳಗ್ಗೆ 9.30ಕ್ಕೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುತ್ತಿದ್ದು, ಉದ್ಘಾಟನಾ ಸಮಾರಂಭದಲ್ಲಿ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರ ಗಂಗಾಧರ್ ಶೇಂದ್ರೆಕಾರ್, ಸಹಮೊಕ್ತೇಸರರಾದ ವಾಣಿ ಕಾಮತ್, ಶ್ರೀ ಕ್ಷೇತ್ರದ ಹರಿಕಾರ ಮುಕುಂದ ಪ್ರಭು, ಅರ್ಚಕ ಧನಂಜಯ ಭಟ್, ಮಾಜಿ ಸೈನಿಕ ಗಣೇಶ್ ಕಾಮತ್, ಶ್ರೀ ಸರಸ್ವತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಲ್ಲಡ್ಕ ಶಾಖೆಯ ಶಾಖಾ ವ್ಯವಸ್ಥಾಪಕ ಗೋಪಾಲಕೃಷ್ಣ ಪ್ರಭು, ಮೋಂತಿಮಾರು ಭಜನಾ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್, ಮೋಂತಿಮಾರು ಮಹಿಳಾ ಮಂಡಳಿ ಅಧ್ಯಕ್ಷೆ ಗಿರಿಜಾ ಕಾಮತ್, ಮೋಂತಿಮಾರು ಆರ್ಎಸ್ಬಿ ಸಂಘದ ಅಧ್ಯಕ್ಷ ದಿನೇಶ್ ಪ್ರಭು ಖಂಡಿಗ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀಕ್ಷೇತ್ರದ ಸಹ ಮೊಕ್ತೇಸರರಾದ ವಿಕಾಸ್ ಪುತ್ತೂರು, ಸಂತೋಷ್ ನಾಯಕ್ ಗುಂಡಿಮಜಲು, ಅರ್ಚಕರಾದ ಮಂಜುನಾಥ್ ಭಟ್, ರೋಹಿತ್ ಭಟ್, ಹಿರಿಯ ಕಾರ್ಯಕರ್ತ ನಾರಾಯಣ ಪ್ರಭು ನೂಜಿ, ಮಂಚಿ ಗ್ರಾಮ ಪಂಚಾಯತ್ ಸದಸ್ಯ ಮೋಹನ್ ಪ್ರಭು ಕುಂಟೂರು, ಶ್ರೀಕ್ಷೇತ್ರದ ವ್ಯವಸ್ಥಾಪಕ ಅಶೋಕ್ ನಾಯಕ್ ನಾಡಾಜೆ, ಆರ್ಎಸ್ಬಿ ಮೋಂತಿಮಾರು ಸಂಘದ ಮಾಜಿ ಅಧ್ಯಕ್ಷ ಅತುಲ್ ನಾಯಕ್ ಆಳಾಬೆ, ದೈಹಿಕ ಶಿಕ್ಷಕ ಸಾಯಿರಾಮ್ ನಾಯಕ್ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

