ಉಡುಪಿ: ಕ್ಷುಲ್ಲಕ ಕಾರಣಕ್ಕೆ ಪೋಷಕರೊಂದಿಗೆ ಜಗಳವಾಡಿದ 31 ವರ್ಷದ ವ್ಯಕ್ತಿಯೊಬ್ಬ ತನ್ನ ಹೆತ್ತ ತಂದೆ-ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಗಾಂಧಿನಗರದಲ್ಲಿ ನಡೆದಿದೆ.
ಕೊಲೆಯಾದವರನ್ನು ಲಾರಿ ಚಾಲಕರಾದ ಮೆಹಬೂಬ್ ಅಲಿ (55) ಮತ್ತು ಅವರ ಪತ್ನಿ ಶಂಷಾದ್ ಬೇಗಂ (50) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅವರ ಮಗ ಶಾಹಿದ್ ಅಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆ ಆರೋಪಿ ಶಾಹಿದ್ ಅಲಿ ಜೊಮ್ಯಾಟೋ (Zomato) ಆಹಾರ ವಿತರಣಾ ಉದ್ಯೋಗಿಯಾಗಿ (Food Delivery Executive) ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ತಂದೆ ಪ್ರತಿದಿನ ತನ್ನ ಮೇಲೆ ಹಲ್ಲೆ ನಡೆಸಿ ಬೈಯುತ್ತಿದ್ದರು ಮತ್ತು ತಾಯಿ ತಂದೆಯನ್ನೇ ಬೆಂಬಲಿಸುತ್ತಿದ್ದರು. ಇದರಿಂದಾಗಿ ತೀವ್ರ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೆ ಎಂದು ಆರೋಪಿ ಆರೋಪಿಸಿದ್ದಾನೆ.
ಇದನ್ನೂ ಓದಿ: ಆರ್ಆರ್ಬಿ ಜೆಇ ಹುದ್ದೆಗಳ ಸಂಖ್ಯೆ ಹೆಚ್ಚಳ: 4,029 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ವಿವರ ಇಲ್ಲಿದೆ
ಭಾನುವಾರ ರಾತ್ರಿ ಪೋಷಕರೊಂದಿಗೆ ಕ್ಷುಲ್ಲಕ ಜಗಳ ನಡೆದಿದ್ದು, ಆಕ್ರೋಶಗೊಂಡ ಶಾಹಿದ್ ಸುತ್ತಿಗೆಯಿಂದ ಪೋಷಕರ ತಲೆಗೆ ತೀವ್ರವಾಗಿ ಹೊಡೆದಿದ್ದಾನೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಹತ್ಯೆಯ ನಂತರ ಆರೋಪಿ ತಾನೇ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 103ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

