Lifestyle: ಮಾನವನ ಜೀವನದಲ್ಲಿ ಭವಿಷ್ಯದ ಬಗ್ಗೆ ಆಲೋಚಿಸುವುದು ಸಹಜ. ಉತ್ತಮ ಶಿಕ್ಷಣ, ಉತ್ತಮ ಉದ್ಯೋಗ, ಆರೋಗ್ಯಕರ ಜೀವನ, ಸಂತೋಷದ ಕುಟುಂಬ – ಇವೆಲ್ಲವೂ ಭವಿಷ್ಯದ ಕನಸುಗಳೇ. ಆದರೆ ಈ ಭವಿಷ್ಯದ ಬಗ್ಗೆ ಅತಿಯಾಗಿ ಚಿಂತಿಸುವ ಸ್ವಭಾವವೇ ಕೆಲವೊಮ್ಮೆ ನಮ್ಮ ಇಂದಿನ ಜೀವನದ ಶಾಂತಿಯನ್ನು ಕಸಿದುಕೊಳ್ಳುತ್ತದೆ.
ಭಯ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ;

ಕೆಲವರು ಭವಿಷ್ಯದ ಬಗ್ಗೆ ಅತಿಯಾಗಿ ಯೋಚನೆ ಮಾಡ್ತಾರೆ. ಆದರೆ ಕೆಲಸಕ್ಕೆ ಬಾರದ ಯೋಚನೆಗಳ ಹೊರತಾಗಿ ಉತ್ತಮ ಭವಿಷ್ಯ ರೂಪಿಸುವ ಯೋಜನೆಗಳ ಬಗ್ಗೆ ಗಮನ ಹರಿಸಬೇಕಾಗಿದೆ. ಭವಿಷ್ಯದ ಬಗ್ಗೆ ಯೋಚಿಸುವುದು ತಪ್ಪಲ್ಲ. ಅದು ನಮ್ಮ ಗುರಿಗಳನ್ನು ನಿರ್ಧರಿಸಲು, ಯೋಜನೆ ರೂಪಿಸಲು ಮತ್ತು ಶ್ರಮಿಸಲು ಪ್ರೇರಣೆ ನೀಡುತ್ತದೆ. ಆದರೆ ಆ ಯೋಚನೆ ಮಿತಿಮೀರಿದಾಗ ಅದು ಭಯವಾಗಿ, ಅನುಮಾನವಾಗಿ ಬದಲಾಗುತ್ತದೆ. ಆಗ ನಾವು ಅವಕಾಶಗಳನ್ನು ಕಾಣದೆ, ತಪ್ಪುಗಳನ್ನೇ ಕಾಣುತ್ತೇವೆ. ಈ ಭಯ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.
ಮಾನವನ ಜೀವನದಲ್ಲಿ ಭವಿಷ್ಯದ ಕುರಿತು ಆಲೋಚನೆ ಅನಿವಾರ್ಯ. ಇಂದಿನ ಕಾರ್ಯಗಳು ನಾಳೆಯ ಜೀವನವನ್ನು ರೂಪಿಸುತ್ತವೆ ಎಂಬ ಅರಿವು ಇರುವವರು ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತಿಸುತ್ತಾರೆ. ಇಂತಹವರು ಕೇವಲ ಕನಸು ಕಾಣುವುದಲ್ಲ, ಆ ಕನಸುಗಳನ್ನು ಸಾಕಾರಗೊಳಿಸಲು ಯೋಜನೆ ರೂಪಿಸಿ ಕ್ರಮಬದ್ಧವಾಗಿ ಮುಂದುವರಿಯುತ್ತಾರೆ. ಭವಿಷ್ಯದ ಬಗ್ಗೆ ಆಲೋಚಿಸುವವರು ಸಮಾಜದ ಪ್ರಗತಿಗೂ ಕಾರಣರಾಗುತ್ತಾರೆ.
ಆದರೆ, ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ಮಾಡುವುದು ವರ್ತಮಾನವನ್ನು ಮರೆಸಬಾರದು. ಇಂದಿನ ಕ್ಷಣವನ್ನು ಸಾರ್ಥಕವಾಗಿ ಬದುಕುತ್ತಾ, ನಾಳೆಯತ್ತ ಸಕಾರಾತ್ಮಕ ದೃಷ್ಟಿಯಿಂದ ಹೆಜ್ಜೆ ಹಾಕುವುದು ಮುಖ್ಯ. ಹೀಗಾಗಿ ಸಮತೋಲನದ ಆಲೋಚನೆಯೇ ನಿಜವಾದ ಬುದ್ಧಿವಂತಿಕೆಯಾಗಿದೆ. ಧ್ಯಾನ, ಯೋಗ, ಸಕಾರಾತ್ಮಕ ಚಿಂತನೆ ಮತ್ತು ಸಮಯ ನಿರ್ವಹಣೆ ಇವು ಭವಿಷ್ಯದ ಭಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಜೀವನವನ್ನು ಹೋಲಿಕೆಗಳ ಮೂಲಕ ಅಳೆಯದೆ, ನಮ್ಮ ಸ್ವಂತ ಪ್ರಯಾಣವನ್ನು ಗೌರವಿಸುವುದು ಅಗತ್ಯ.

