ಪುತ್ತೂರು: ಮಿಸೆಸ್ ಇಂಡಿಯಾ ಕಿರೀಟ-2025 ಅನ್ನು ಮುಡಿಗೇರಿಸಿಕೊಂಡ ತಾಲೂಕಿನ ಮುಂಡೂರಿನವರಾದ ಡಾ.ರಶ್ಮಾ ಎಂ. ಶೆಟ್ಟಿ ಅವರನ್ನು ಮುಂಡೂರು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಶ್ಮಾ ಎಂ ಶೆಟ್ಟಿ, ಸರಕಾರಿ ಶಾಲೆಯಲ್ಲಿ ಕಲಿತವರು ಕೂಡ ಉನ್ನತ ಮಟ್ಟದ ಸಾಧನೆ ಮಾಡಬಹುದು. ನಮ್ಮ ಕಣ್ಣ ಮುಂದೆ ಅನೇಕ ಸಾಕ್ಷಿಗಳಿವೆ ಎಂದರು.

ಶಾಲಾ ಮುಖ್ಯ ಗುರು ವಿಜಯ ಪಿ ಹಾಗೂ ಶಿಕ್ಷಕಿ ವನಿತಾ ಬಿ ಅವರು ಮಾತನಾಡಿ ರಶ್ಮಾ ಅವರ ಸಾಧನೆಗೆ ಶುಭಹಾರೈಸಿದರು.

ಶಾಲಾ ಹಿರಿಯ ವಿದ್ಯಾರ್ಥಿ ರಘುನಾಥ ಶೆಟ್ಟಿ ಪೊನೋನಿ, ಮೋಹಿತ್ ಶೆಟ್ಟಿ, ಸಮಿತಾ ಶೆಟ್ಟಿ, ಕುಮಾರಿ ನೇಸರ, ಎಸ್ಡಿಎಂಸಿ ಉಪಾಧ್ಯಕ್ಷೆ ಜ್ಯೋತಿ ಮತ್ತು ಸದಸ್ಯರು ಹಾಗೂ ಪೋಷಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ರಾಮಚಂದ್ರ ಗೌಡ ಸ್ವಾಗತಿಸಿ, ಶಿಕ್ಷಕ ಅಬ್ದುಲ್ ಬಶೀರ್ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.
ಡಿ.18 ರಿಂದ ಡಿ.21 ರ ವರೆಗೆ ಜೈಪುರದ ಜೈಬಾಗ್ ಪ್ಯಾಲೇಸ್ ನಲ್ಲಿ ನಡೆದ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ರಶ್ಮಾ ಅವರು ಸ್ಪರ್ಧಿಸಿ ಮಿಸೆಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.
ಇವರು ಮೋಹಿತ್ ಶೆಟ್ಟಿ ಅವರ ಪತ್ನಿಯಾಗಿದ್ದು, ನೇಸರ ಎಂಬ ಏಳು ವರ್ಷ ಪುತ್ರಿಯನ್ನು ಹೊಂದಿದ್ದಾರೆ. ನಾರ್ಯಗುತ್ತು ರಘುನಾಥ ಶೆಟ್ಟಿ ಮತ್ತು ಅಮ್ಟೂರು ಬಾಳಿಕೆ ಕಸ್ತೂರಿ ಶೆಟ್ಟಿ ದಂಪತಿಯ ಪುತ್ರಿ, ಕಟಪಾಡಿ ಮೂಡುಬೆಟ್ಟು ಹೊಸಮನೆ ಮನೋಹರ ಶೆಟ್ಟಿ ಮತ್ತು ಮುಚ್ಚೂರು ಬರ್ಕೆ ದಿ.ಮಮತಾ ಶೆಟ್ಟಿ ಅವರ ಸೊಸೆಯಾಗಿದ್ದಾರೆ.
ಪಾಪೆಮಜಲು ಪ್ರೈಮರಿ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಪಡೆದ ಇವರು, ಕೊಂಬೆಟ್ಟು ಸರ್ಕಾರಿ ಪಿಯು ಕಾಲೇಜಿನ ಹಾಗೂ ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ.
ಇದನ್ನೂ ಓದಿ : ಪುತ್ತೂರು: ಎಪಿಎಂಸಿ ರಸ್ತೆಯಲ್ಲಿ ಗೋಶನ್ ಕಾಂಪ್ಲೆಕ್ಸ್ ಲೋಕಾರ್ಪಣೆ
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

