ಬಂಟ್ವಾಳ: ತಾಲೂಕಿನ ಮಾಣಿ ಸಮೀಪದ ಕೊಡಾಜೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನಕ್ಷತ್ರ ಸಭಾಭವನವನ್ನು ಜ.೨೨ ರಂದು ಲೋಕಾರ್ಪಣೆಗೊಳಿಸಲಾಯಿತು.
ಮಾಣಿ ಶ್ರೀ ಉಳ್ಳಾಳ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿಗುತ್ತು ಅವರು ದೀಪ ಬೆಳಗಿಸುವುದರ ಮೂಲಕ ಸಭಾಭವನ ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಮಾಣಿ ಮೈಸೂರು ರಸ್ತೆ ಮತ್ತು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂದಿಸುವ ಮಾಣಿ ಭಾಗವು ಭವಿಷ್ಯದಲ್ಲಿ ಪ್ರಮುಖ ಕೇಂದ್ರವಾಗಲಿದೆ. ಇಂತಹ ಭಾಗದಲ್ಲಿ ನಿರ್ಮಿಸಿರುವ ನಕ್ಷತ್ರ ಸಭಾಭವನವು ಜನರಿಗೆ ಅನುಕೂಲವಾಗಲಿದೆ ಎಂದರು.
ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತನಾಡಿ, ಸಾಮಾನ್ಯ ಜನರು ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ನಡೆಸಲು ನಕ್ಷತ್ರ ಸಭಾಭವನ ಸೂಕ್ತವಾಗಿದೆ. ಸಭಾಭವನದ ಮಾಲೀಕ ದಿಲೀಪ್ ಶೆಟ್ಟಿ ಅವರು ಕಷ್ಟದ ಜೀವನವನ್ನು ಎದುರಿಸಿ ಈ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ಹೇಳಿ ಶುಭಹಾರೈಸಿದರು.

ಮಾಜಿ ಶಾಸಕಿ ಶಕುಂತಲ ಶೆಟ್ಟಿ ಮಾತನಾಡಿ, ಸೀಮಂತ ಶಾಸ್ತ್ರ, ಜನುಮದಿನ ಆಚರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಈ ಸಭಾಭವನದಲ್ಲಿ ಆಚರಿಸಬಹುದಾಗಿದೆ. ಈ ನಕ್ಷತ್ರ ಧ್ರುವ ನಕ್ಷತ್ರವಾಗಿ ಪ್ರಸಿದ್ಧಿ ಪಡೆಯುವಂತಾಗಲಿ ಎಂದು ಹೇಳಿ ಶುಭಹಾರೈಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮೊಹಮ್ಮದ್ ಮಾತನಾಡಿ, ನಕ್ಷತ್ರ ಸಭಾಭವನವು ಸಮಾಜಕ್ಕೆ ವಿಶೇಷ ಕೊಡುಗೆಯಾಗಿದೆ. ಸಮಾಜವು ವೇಗವಾಗಿ ಬೆಳೆಯುತ್ತಿದೆ. ಆದರೆ ಸಭಾಂಗಣದ ಕೊರತೆ ಕಾಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಕ್ಷತ್ರ ಸಭಾಭವನ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿ ದಿಲೀಪ್ ಅವರಿಗೆ ಶುಭಹಾರೈಸಿದರು.
ಉಡುಪಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ, ಉದ್ಯಮಿ ಪ್ರವೀಣ್ ಶೆಟ್ಟಿ ಪುತ್ತೂರು ಉಡುಪಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕ ಪಕ್ಕಳ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ್ ಜೈನ್, ತುಂಬೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆಗುತ್ತು, ಪೆರಾಜೆಯ ಗುಡ್ಡೆಚಾಮುಂಡಿ ದೈವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಶ್ರೀಕಾಂತ್ ಆಳ್ವ ಪೆರಾಜೆಗುತ್ತು, ಕೊಡಾಜೆ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಮೊಹಮ್ಮದ್ ರಫೀಕ್ ಹಾಜಿ ಸುಲ್ತಾನ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ ಅರೆಬೆಟ್ಟುಗುತ್ತು, ಪುತ್ತೂರು ನಗರ ಯೋಜನಾ ಪ್ರಾಧೀಕಾರದ ಸದಸ್ಯ ಅನ್ವರ್ ಖಾಸಿಂ, ಬಂಟ್ವಾಳ ಮುಡೂರು-ಪಡೂರು ಜೋಡೆಕರೆ ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆಗಿರುವ ಸಭಾಭವನದ ಮಾಲಕ ತಂರ್ಜಿಗುತ್ತು ದಿಲೀಪ್ ಶೆಟ್ಟಿ ಸ್ವಾಗತಿಸಿ, ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ನಿರೂಪಿಸಿ ವಂದಿಸಿದರು. ಸೇವಂತಿಕಾ ಪ್ರಕಾಶ್ ರೈ ಪ್ರಾರ್ಥಿಸಿದರು.
ತಂರ್ಜಿಗುತ್ತ ಸುಜಾತ ದಿನೇಶ್ ಶೆಟ್ಟಿ ನೆಲ್ಯಾಡಿ, ತಂರ್ಜಿಗುತ್ತು ಸುದೀಪ್ ಕುಮಾರ್ ಶೆಟ್ಟಿ, ತಂರ್ಜಿಗುತ್ತು ಪ್ರದೀಪ್ ಶೆಟ್ಟಿ, ದಿಲೀಪ್ ಶೆಟ್ಟಿ ಪತ್ನಿ ಕಾಡೂರುಗುತ್ತು ಸುಲೋಚನಾ ಡಿ. ಶೆಟ್ಟಿ, ಮಾ. ಧನ್ವಿತ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.
ಯಕ್ಷ ‘ಗಾನ’ ವೈಭವ
ಸಭಾಭವನದ ಉದ್ಘಾಟನೆ ಪ್ರಯುಕ್ತ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷ ‘ಗಾನ’ ವೈಭವ ನಡೆಯಿತು. ಧೀರಜ್ ರೈ ಸಂಪಾಜೆ, ಭರತ್ ರಾಜ್ ಶೆಟ್ಟಿ ಸಿದ್ಧಕಟ್ಟೆ, ಶ್ರೇಯ ಆಚಾರ್ಯ ಪುತ್ತೂರು ಭಾಗವತಿಕೆ ಮಾಡಿದರು. ರೋಹಿತ್ ಉಚ್ಚಿಲ ಅವರು ಚೆಂಡೆ, ಶ್ರೀಧರ್ ವಿಟ್ಲ ಅವರು ಮದ್ದಳೆ ಹಾಗೂ ನಿಶ್ವತ್ ಜೋಗಿ ಅವರು ಚಕ್ರತಾಳ ಬಾರಿಸಿದರು.

