ಮಂಗಳೂರು: ಉಡುಪಿ ಜಿಲ್ಲಾಧಿಕಾರಿ ಕೇಸರಿ ಧ್ವಜ ಹಾರಿಸಿದ್ದು ಕಾಂಗ್ರೆಸ್ ನಾಯಕರ ಕಣ್ಣು ಕೆಂಪಗಾಗಿಸಿದ್ದವು. ಇದರ ಬೆನ್ನಲ್ಲೇ ಹೇಳಿಕೆ ನೀಡಿದ ಮಾಜಿ ಸಚಿವ ರಮಾನಾಥ ರೈ, ದೇವಸ್ಥಾನಗಳಲ್ಲಿ ಕೇಸರಿ ಧ್ವಜ ಸೇರಿದಂತೆ ಯಾವುದೇ ಧ್ವಜಗಳನ್ನು ಹಾರಿಸಬೇಡಿ ಎಂದಿದ್ದಾರೆ.
ಮಂಗಳೂರಿನ ಗಾಂಧಿ ಪ್ರತಿಮೆ ಎದುರು ನಡೆದ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಉಡುಪಿ ಪರ್ಯಾಯ ಮಹೋತ್ಸವದ ಸಂದರ್ಭ ಕೇಸರಿ ಧ್ವಜ ಹಾರಿಸಿದ ವಿಚಾರವಾಗಿ ಮಾತನಾಡಿದ ಅವರು, ದೇವಾಲಯದ ಕಾರ್ಯಕ್ರಮದಲ್ಲಿ ರಾಜಕೀಯ ಪ್ರೇರಿತ ಪತಾಕೆ ಹಾರಿಸಿರುವುದನ್ನು ಧಿಕ್ಕರಿಸಬೇಕು ಎಂದರು.

ದೇವಸ್ಥಾನದ ಕಾರ್ಯಕ್ರಮ, ಎಲ್ಲರಿಗೂ ಸಮಾನವಾದ ಕಾರ್ಯಕ್ರಮ. ದೇವಸ್ಥಾನದಲ್ಲಿ ಕಾಂಗ್ರೆಸ್ ಪತಾಕೆ, ಕೇಸರಿ, ಹಸಿರು ಯಾವುದೇ ಪತಾಕೆ ಹಾಕಬೇಡಿ ಎಂದ ಅವರು, ರಾಜಕೀಯ ಪ್ರೇರಿತ ಪತಾಕೆಗಳನ್ನು ದೇವಸ್ಥಾನಗಳಲ್ಲಿ ಹಾಕುವುದನ್ನು ಖಂಡಿಸಬೇಕು. ಉಡುಪಿ ಮಠದಲ್ಲಿ ಕೇಸರಿ ಧ್ವಜ ಹಾರಿಸಿದ್ದು ತಪ್ಪು ಎಂದು ಹೇಳಬೇಕೆಂದು ಕಾಂಗ್ರೆಸಿಗರಿಗೆ ಕರೆ ನೀಡಿದರು.
ಇದನ್ನೂ ಓದಿ: ಉಡುಪಿ: ಪರ್ಯಾಯ ಕಾರ್ಯಕ್ರಮದಲ್ಲಿ ಕೇಸರಿ ಧ್ವಜ ಹಾರಿಸಿದ ಡಿಸಿ ವಿರುದ್ಧ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಒತ್ತಾಯ
ಉಡಪಿ ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಕೇಸರಿ ಧ್ವಜ ಹಾರಿಸಿದ್ದರು. ಇದರ ವಿರುದ್ಧ ಕಾಂಗ್ರೆಸ್ ನಾಯಕರು ಟೀಕೆ ವ್ಯಕ್ತಪಡಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾನೂನು ಮತ್ತು ಮಾನವ ಹಕ್ಕುಗಳ ಇಲಾಖೆಯ ಅಧ್ಯಕ್ಷ ಹರೀಶ್ ಶೆಟ್ಟಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.
ಅದಾಗ್ಯೂ, ಹಿಂದೂ ಧರ್ಮಕ್ಕೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಕೇಸರಿ ಧ್ವಜಗಳ ಜೊತೆಗೆ ಕೇಸರಿ ಬಂಟಿಂಗ್ಸ್ಗಳನ್ನು ಹಾಕುವುದು ಸಾಮಾನ್ಯ. ಆದರೆ, ಈಗ ಕೇಸರಿ ಧ್ವಜವನ್ನೂ ಹಾರಿಸಬಾರದು ಎಂದರೆ ಹೇಗೆ ಎಂದು ಜನಸಾಮಾನ್ಯರು ಪ್ರಶ್ನಿಸತೊಡಗಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

