ಬಂಟ್ವಾಳ: ಆಂಧ್ರಪ್ರದೇಶದ ಎನ್ಟಿಆರ್ ಸ್ಟೇಡಿಯಂನಲ್ಲಿ ನಡೆದ 69ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ ಫೆಡರೇಷನ್ 14ರ ವಯೋಮಾನದ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ನೂಜಿಬೈಲ್ನ ಚೈತನ್ಯ ಬಿ. ಅವರು ೫ನೇ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಅದರಂತೆ, ಜ.19 ರಿಂದ ಜ.23ರ ವರೆಗೆ ಆಂಧ್ರಪ್ರದೇಶದಲ್ಲಿ ನಡೆದ 14ರ ವಯೋಮಾನದ ಹುಡುಗಿಯರ ವಿಭಾಗದ ರಾಷ್ಟ್ರಮಟ್ಟದ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ 5ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ನೂಜಿಬೈಲ್ ಭಂಡಾರದ ಮನೆಯ ಹರೀಶ ಹಾಗೂ ಹೇಮಲತಾ ದಂಪತಿಯ ಪುತ್ರಿಯಾಗಿರುವ ಚೈತನ್ಯ ಅವರು ವಿಟ್ಲದ ಪಿಎಂಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ 8ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸ್ವಸ್ತಿಕ್ ಪ್ರೀಮಿರ್ ಲೀಗ್-1 ಕ್ರಿಕೆಟ್ ಟೂರ್ನಮೆಂಟ್: ನವೀನ್ ಶೆಟ್ಟಿ ತಂಡ ಚಾಂಪಿಯನ್

ಕಲಿಕೆಯಲ್ಲಿ ಎ+ ಶ್ರೇಣಿಯನ್ನು ಹೊಂದಿರುವ ಚೈತನ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಗ್ರೇಡ್ ಮುಗಿಸಿ ಸೀನಿಯರ್ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಕಬಡ್ಡಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ಇವರು, 2023ರಿಂದ 2025ರ ವರೆಗೆ ಸತತವಾಗಿ ಮೂರು ಬಾರಿ ವಲಯ, ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.
ಸ್ಪೋರ್ಟ್ಸ್ ಫಾರ್ ಚೇಂಜ್ ಹೆಚ್ಸಿಎಲ್ ಸಂಸ್ಥೆ ವತಿಯಿಂದ ನಡೆಸಿದ್ದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸತತ 2ನೇ ಬಾರಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಇತರ ಹೊರವಲಯದ ಕಬಡ್ಡಿ ಪಂದ್ಯಾಟಗಳಲ್ಲಿಯೂ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬೆಸ್ಟ್ ಡಿಫೆಂಡರ್ ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ.
ಚೈತನ್ಯ ಅವರಿಗೆ ಪಿಎಂಶ್ರೀ ಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕ ವಿದ್ಯಾಶಂಕರ್ ಹಾಗೂ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಬಾಲಕೃಷ್ಣ ರೈ ಪೆರ್ದಾಲ್ ಅವರು ತರಬೇತಿ ನೀಡಿದ್ದಾರೆ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
(ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com)

