ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಶ್ರೀ ಕ್ಷೇತ್ರ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ ಜನವರಿ ೩ ರಂದು ನಡೆಯಿತು. ಮುಂಜಾನೆ ರಾಷ್ಟ್ರ ವಿಜಯ ಯಜ್ಞ, ಶ್ರೀ ದೇವಿಗೆ ಮಹಾಮಂಗಳಾರತಿ ನಡೆಯಿತು. ಸಂಜೆ 4 ಗಂಟೆಗೆ ಭಜನಾ ಕಮ್ಮಟ ನಡೆಯಿತು.
ಖ್ಯಾತ ಗಾಯ ಜಗದೀಶ್ ಆಚಾರ್ಯ ಮತ್ತು ಬಳಗದ ಸುಮಧುರ ಕಂಠದಿಂದ ಹೊರಬಂದ ಭಜನಾ ಹಾಡಿಗೆ ಏಕಕಾಲದಲ್ಲಿ 22 ಕುಣಿತ ಭಜನಾ ತಂಡಗಳು ಹೆಜ್ಜೆ ಹಾಕಿದವು. ಕುಣಿತ ಭಜನೆಯಲ್ಲಿ ಪುಟಾಣಿ ಮಕ್ಕಳು ತಲ್ಲೀನರಾಗಿ ಪುಟ್ಟ ಪುಟ್ಟ ಹೆಜ್ಜೆ ಹಾಕುವುದನ್ನು ನೋಡಿ ಭಕ್ತರು ಕಣ್ತುಂಬಿಕೊಂಡರು.

ಇದನ್ನೂ ಓದಿ: ರಾಷ್ಟ್ರ ರಕ್ಷಣೆಗಾಗಿ ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಾಷ್ಟ್ರ ವಿಜಯ ಯಜ್ಞ
ಭಜನಾ ಕಮ್ಮಟದ ನಂತರ ರಂಗಪೂಜೆ ನಡೆಯಿತು. ನಂತರ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ನಡೆಯಿತು. ಬ್ಯಾಂಡ್, ವಾದ್ಯಗಳೊಂದಿಗೆ, ಭಜನೆ, ಮಂತ್ರ ಘೋಷವೂ ಮೊಳಗಿದವು. ಉತ್ಸವದಲ್ಲಿ ಸಾಗಿದ ಗೊಂಬೆಗಳು ಪ್ರೇಕ್ಷಕರನ್ನು ಆಕರ್ಷಿಸಿತು.


ಸುಡು ಮದ್ದು ಪ್ರದರ್ಶನ
ಪಲ್ಲಕ್ಕಿ ಉತ್ಸವ ಆರಂಭವಾಗುತ್ತಿದ್ದಂತೆ ಸುಡುಮದ್ದು ಪ್ರದರ್ಶನವೂ ಪ್ರಾರಂಭವಾಯಿತು. ಅಶ್ವತ್ಥಕಟ್ಟೆಯಲ್ಲಿ ಅಮ್ಮನವರ ಪೂಜೆ ವೇಳೆಯಲ್ಲಿ ಬೃಹತ್ ಪ್ರಮಾಣದಲ್ಲಿ ಸುಡು ಮದ್ದು ಪ್ರದರ್ಶನ ನಡೆಯುತ್ತದೆ. ಇದನ್ನು ಮೋಂತಿಮಾರು ಬೆಡಿ ಎಂದೇ ಕರೆಯಲಾಗುತ್ತದೆ.
ಇದನ್ನೂ ಓದಿ: ಈ ಜಾತ್ರೆಯ ಪ್ರಮುಖ ಆಕರ್ಷಣೆಯೇ ರಥೋತ್ಸವ : ಊರ ಪರವೂರಿನಿಂದಲೂ ಜನಸಾಗರ
ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ
ರಾತ್ರಿ ೧೦:೩೦ ರಿಂದ ಮುಂಜಾನೆ ವರೆಗೆ ಬಪ್ಪನಾಡು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ಈ ವೇಳೆ ನೂರಾರು ಭಕ್ತರು ನೆರೆದಿದ್ದರು. ದೇವಾಲಯದ ವತಿಯಿಂದ ಮಧ್ಯರಾತ್ರಿ ಚಹಾದ ವ್ಯವಸ್ಥೆಯನ್ನು ಮಾಡಲಾಯಿತು.
ದೇವಾಲಯದಲ್ಲಿ ನಿತ್ಯ ಅನ್ನದಾನ
ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಿಯು ಭಕ್ತರ ಪಾಲಿನ ಅನ್ನಪೂರ್ಣೇಶ್ವರಿಯೂ ಹೌದು. ಜಾತ್ರೆಯಂತಹ ಕಾರ್ಯಕ್ರಮಗಳ ಸಂದರ್ಭದಲ್ಲಿ ಮಾತ್ರವಲ್ಲದೆ ಶ್ರೀ ಕ್ಷೇತ್ರದಲ್ಲಿ ನಿತ್ಯ ಅನ್ನದಾನ ನಡೆಯುವುದು ವಿಶೇಷವಾಗಿದೆ. ಪ್ರತಿಷ್ಠಾ ವರ್ಧಂತಿ ಉತ್ಸವದಂದೂ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

