ನವದೆಹಲಿ: ಕೇರಳ ರಾಜ್ಯದ ಹೆಸರನ್ನು ಮಲಯಾಳಂ ಭಾಷೆಯ ಉಚ್ಚಾರಣೆಗೆ ಅನುಗುಣವಾಗಿ ‘ಕೇರಳಂ’ ಎಂದು ಬದಲಾಯಿಸಬೇಕೆಂಬ ದೀರ್ಘಕಾಲದ ಬೇಡಿಕೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅಧಿಕೃತ ಅನುಮೋದನೆ ನೀಡಲಾಗಿದೆ.
ಕೇರಳ ವಿಧಾನಸಭೆಯು 2024ರ ಜೂನ್ 24ರಂದು ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವಂತೆ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತ್ತು. ಮಲಯಾಳಂ ಭಾಷೆಯಲ್ಲಿ ರಾಜ್ಯವನ್ನು ಮೊದಲಿನಿಂದಲೂ ‘ಕೇರಳಂ’ ಎಂದೇ ಕರೆಯಲಾಗುತ್ತಿದ್ದು, ಸಂವಿಧಾನದ ದಾಖಲೆಗಳಲ್ಲಿಯೂ ಇದನ್ನೇ ಅಳವಡಿಸಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒತ್ತಾಯಿಸಿದ್ದರು.

ಸಂವಿಧಾನದ ವಿಧಿ 3ರ ಅಡಿಯಲ್ಲಿ ರಾಜ್ಯದ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರವು ಈಗ ‘ಕೇರಳ (ಹೆಸರು ಬದಲಾವಣೆ) ವಿಧೇಯಕ, 2026’ ಅನ್ನು ಸಿದ್ಧಪಡಿಸಿದೆ. ಈ ವಿಧೇಯಕವನ್ನು ರಾಷ್ಟ್ರಪತಿಗಳು ಕೇರಳ ವಿಧಾನಸಭೆಯ ಅಭಿಪ್ರಾಯಕ್ಕಾಗಿ ಕಳುಹಿಸಲಿದ್ದಾರೆ. ನಂತರ ಸಂಸತ್ತಿನಲ್ಲಿ ವಿಧೇಯಕ ಮಂಡಿಸಿ ಸಂವಿಧಾನದ ಮೊದಲ ಅನುಸೂಚಿಗೆ ತಿದ್ದುಪಡಿ ತರಲಾಗುವುದು. ಪ್ರಧಾನಿ ಮೋದಿ ಅವರು ಈ ನಿರ್ಧಾರವನ್ನು ಸ್ವಾಗತಿಸಿದ್ದು, ಇದು ರಾಜ್ಯದ ಸಾಂಸ್ಕೃತಿಕ ಪರಂಪರೆ ಮತ್ತು ಜನರ ಆಶಯವನ್ನು ಗೌರವಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅತಿ ವೇಗದ ಮೆಟ್ರೋ ಹಾಗೂ ನಮೋ ಭಾರತ್ ರಾಪಿಡ್ ರೈಲ್ ಕಾರಿಡಾರ್ ಉದ್ಘಾಟಿಸಿದ ಪ್ರಧಾನಿ ಮೋದಿ
ಕೇರಳ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ರಾಜಕೀಯವಾಗಿ ಭಾರಿ ಮಹತ್ವ ಪಡೆದುಕೊಂಡಿದೆ. ರಾಜ್ಯದ ಸಾಂಸ್ಕೃತಿಕ ಅಸ್ಮಿತೆಯ ವಿಚಾರದಲ್ಲಿ ಬಿಜೆಪಿ ಸರ್ಕಾರವು ಮಲಯಾಳಿಗಳ ಪರವಾಗಿದೆ ಎಂಬ ಸಂದೇಶವನ್ನು ಇದು ನೀಡುತ್ತಿದೆ. 1956ರ ನವೆಂಬರ್ 1 ರಂದು ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಮಲಯಾಳಂ ಭಾಷಿಕರಿಗಾಗಿ ಕೇರಳ ರಾಜ್ಯ ರಚನೆಯಾಯಿತು. ಅಂದಿನಿಂದಲೂ ಸ್ಥಳೀಯವಾಗಿ ‘ಕೇರಳಂ’ ಎಂಬ ಹೆಸರೇ ಚಾಲ್ತಿಯಲ್ಲಿದೆ. ಈಗ ಈ ಬದಲಾವಣೆಯ ಮೂಲಕ ಇಂಗ್ಲಿಷ್ ಹಾಗೂ ಇತರ ಅಧಿಕೃತ ಭಾಷೆಗಳಲ್ಲಿಯೂ ‘ಕೇರಳಂ’ ಎಂದೇ ಕರೆಯಲ್ಪಡಲಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

