ಬೆಳಗಾವಿ: ಪಾರ್ಟಿ ನೆಪದಲ್ಲಿ ಜಮೀನಿಗೆ ಕರೆದೊಯ್ದು ಮರ್ಮಾಂಗವನ್ನು ಕತ್ತರಿಸಿ ತನ್ನ ಪತಿಯನ್ನೇ ಪತ್ನಿಯೇ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಹೊರವಲಯದಲ್ಲಿ ನಡೆದಿದೆ. ಕಲ್ಮೇಶ್ ಕೋಟಿ ಕೊಲೆಯಾದ ವ್ಯಕ್ತಿಯಾಗಿದ್ದು, ಫೆಬ್ರವರಿ ೨೦ರಂದು ಇವರ ಮೃತದೇಹ ಪತ್ತೆಯಾಗಿತ್ತು.
ಮೃತದೇಹ ಪತ್ತೆ ಬೆನ್ನಲ್ಲೇ ಪೊಲೀಸರು ತನಿಖೆ ಕೈಗೊಂಡಾಗ ಮೃತನ ಪತ್ನಿ ಕಸ್ತೂರಿ ಕೋಟಿ ಹಾಗೂ ಮಗ ಕಿರಣ್ ಕೋಟಿ ಸಂಚು ರೂಪಿಸಿ ಕೊಲೆ ಮಾಡಿರುವ ವಿಚಾರ ಬಯಲಿಗೆ ಬಂದಿದೆ. ತುಮಕೂರಿನಲ್ಲಿ ಹೋಮ್ ಕೇರ್ ಉದ್ಯೋಗದಲ್ಲಿದ್ದ ಕಲ್ಮೇಶ್, ಶಿವರಾತ್ರಿ ಹಬ್ಬಕ್ಕೆ ಊರಿಗೆ ಬಂದಿದ್ದಾಗ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕೊಲೆ ನಂತರ ಆರೋಪಿಗಳಲ್ಲಿ ಒಬ್ಬ ತನ್ನ ಅಕ್ಕನಿಗೆ ವಿಷಯ ತಿಳಿಸಿದ್ದಾನೆ. ಪೊಲೀಸರು ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದಾಗ ಕಲ್ಮೇಶ್ ಬಾಮೈದ ಮಲ್ಲೇಶ ಅಂಬಣ್ಣವರ (೩೨) ಹಾಗೂ ಅವನ ಸ್ನೇಹಿತ ಮುದುಕಪ್ಪ ಕೋಲೇಕರ್ ಅವರು ಕೊಲೆಗೆ ಕೈಜೋಡಿಸಿರುವ ವಿಚಾರ ಬಯಲಿಗೆ ಬಂದಿದ್ದು, ಇವರನ್ನೂ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ತಾಯಿಯ ಕಣ್ಣೆದುರೇ ರೌಡಿ ಶೀಟರ್ ಭರ್ಬರ ಹತ್ಯೆ
ಕಲ್ಮೇಶ್ ಮತ್ತು ಕಸ್ತೂರಿ ನಡುವೆ ದಾಂಪತ್ಯ ಕಲದಲ್ಲಿದ್ದು, ಈ ಹಿನ್ನೆಲೆ ಕಸ್ತೂರಿ ತನ್ನ ಪುತ್ರನೊಂದಿಗೆ ತವರು ಮನೆ ಸೇರಿದ್ದರು. ಐದು ವರ್ಷಗಳ ಹಿಂದೆ ಪುತ್ರಿಯ ಮದುವೆಗೆ ೮ ಲಕ್ಷ ರೂಪಾಯಿ ಸಾಲಕ್ಕಾಗಿ ಕಸ್ತೂರಿ, ಕಲ್ಮೇಶ್ ಹೆಸರಿನ ಮೂರು ಎಕರೆ ಪಿತ್ರಾರ್ಜಿತ ಜಮೀನನ್ನು ಅಡಮಾನ ಇಟ್ಟಿದ್ದರು. ಇದೇ ಆಸ್ತಿ ದಾಂಪತ್ಯದಲ್ಲಿ ಒಡಕು ಮೂಡಲು ಮೂಲ ಕಾರಣವಾಗಿದೆ ಎಂದು ವರದಿಯಾಗಿದೆ.
ಜಮೀನು ಬರೆದುಕೊಡಲು ಪತಿ ನಿರಾಕರಿಸಿದ್ದರಿಂದ ಬೇಸತ್ತ ಪತ್ನಿ ಕಸ್ತೂರಿ, ತನ್ನ ಸಹೋದರರೊಂದಿಗೆ ಸೇರಿ ಪತಿ ಕಲ್ಮೇಶ್ ಅವರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಳು. ಪತಿ ಮರಣ ಹೊಂದಿದರೆ ಜಮೀನು ತನ್ನ ಹೆಸರಿಗೆ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ತಿ ವಿವಾದವೇ ಕೊಲೆಗೆ ಕಾರಣ ಎಂದು ಕಿತ್ತೂರು ಪೊಲೀಸರು ತನಿಖೆಯಲ್ಲಿ ಪತ್ತೆಹಚ್ಚಿದ್ದು, ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

