ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಮಾ.24 ರಂದು ಭಕ್ತಿಭಾವದಿಂದ ಸಂಪನ್ನಗೊಂಡಿತು. ಮಾ.23 ರಂದು ಆರಂಭವಾದ ಈ ಜಾತ್ರೋತ್ಸವವು ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಉತ್ಸವದ ಮೊದಲ ದಿನವಾದ ಮಾ.23ರಂದು ಪ್ರಾತಃಕಾಲದಲ್ಲಿ ದೇವತಾ ಪ್ರಾರ್ಥನೆ ಹಾಗೂ ದುರ್ಗಾಹವನ ನಡೆಯಿತು. ಬಳಿಕ ಮಧ್ಯಾಹ್ನ 12 ಗಂಟೆಗೆ ಶ್ರೀ ದೇವಿಗೆ ಮಹಾಪೂಜೆ ನೆರವೇರಿಸಿ, ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ 8.30ರಿಂದ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಭಕ್ತರ ಸಮ್ಮುಖದಲ್ಲಿ ಜರುಗಿತು. ನಂತರ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು.

ಈ ಸೇವಾ ಉತ್ಸವವು ಕೊಕ್ಕಪುಣಿ ದಿ. ನಾರಾಯಣ ಪ್ರಭು ಅವರ ಸ್ಮರಣಾರ್ಥವಾಗಿ ಅವರ ಕುಟುಂಬಸ್ಥರಿಂದ ನೆರವೇರಿಸಲಾಯಿತು. ಅದೇ ದಿನ ರಾತ್ರಿ 11 ಗಂಟೆಯಿಂದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ನಿರ್ದೇಶನದಲ್ಲಿ ವಿಧಾತ್ರಿ ಕಲಾವಿದೆರ್ ತಂಡದಿಂದ ‘ಜೈ ಹನುಮಾನ್’ ಎಂಬ ರಾಮಾಯಣ ಆಧಾರಿತ ನಾಟಕ ಪ್ರದರ್ಶನಗೊಂಡು ಜನಮನಸೆಳೆಯಿತು.
ಇದನ್ನೂ ಓದಿ: ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕುಂಕುಮಾರ್ಚನೆ, ದುರ್ಗಿ ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ
ಮಾ.24ರಂದು ಬೆಳಗ್ಗೆ 10.30ರಿಂದ ದೇವಸ್ಥಾನದ ವಾರ್ಷಿಕ ಮಹಾಸಭೆ ನಡೆಯಿತು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ 7 ಗಂಟೆಯಿಂದ ರೇಖಾ ಪ್ರಶಾಂತ್ ಅವರ ನಟರಾಜ ನೃತ್ಯಾಲಯದ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಕಾರ್ಯಕ್ರಮ ಜರುಗಿತು.
ರಾತ್ರಿ 9 ಗಂಟೆಗೆ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಮತ್ತೆ ನಡೆಯಿತು. ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಸುಡುಮದ್ದು ಪ್ರದರ್ಶನವೂ ನಡೆಯಿತು. ಎರಡು ದಿನಗಳ ಕಾಲ ನಡೆದ ಈ ಜಾತ್ರೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಕೃಪೆಗೆ ಪಾತ್ರರಾದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

