ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ, ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಎಕ್ಸಿಟ್ ಪೋಲ್ (ಚುನಾವಣೋತ್ತರ ಸಮೀಕ್ಷೆ) ನಡೆಸುವುದಕ್ಕೂ ಹಾಗೂ ಅದರ ಫಲಿತಾಂಶಗಳನ್ನು ಪ್ರಕಟಿಸುವುದಕ್ಕೂ ಭಾರತೀಯ ಚುನಾವಣಾ ಆಯೋಗ ಕಟ್ಟುನಿಟ್ಟಿನ ನಿಷೇಧ ಹೇರಿದೆ.
ಈ ನಿಷೇಧವು ಏಪ್ರಿಲ್ 9ರ ಬೆಳಗ್ಗೆ 7:00 ಗಂಟೆಯಿಂದ ಏಪ್ರಿಲ್ 29ರ ಸಂಜೆ 6:30ರವರೆಗೆ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ. ಈ ಕುರಿತು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (CEO) ಮಾರ್ಚ್ 27ರಂದು ಆದೇಶ ಹೊರಡಿಸಿದ್ದು, ನಂತರ ರಾಜ್ಯ ಗಜೆಟ್ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: ಮಳೆಗಾಲ: ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ, ಆಗಬೇಕಿದೆ ಈ ಎಲ್ಲಾ ತುರ್ತು ಕಾರ್ಯಗಳು
ಚುನಾವಣಾ ಆಯೋಗದ ಸೂಚನೆಯಂತೆ, ದೇಶದ ಆರು ರಾಜ್ಯಗಳ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ಜನಪ್ರತಿನಿಧಿಗಳ ಕಾಯ್ದೆ 1951ರ ಸೆಕ್ಷನ್ 126A ಪ್ರಕಾರ, ಚುನಾವಣಾ ಅವಧಿಯಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಎಕ್ಸಿಟ್ ಪೋಲ್ ನಡೆಸುವುದು ಅಥವಾ ಅದರ ಫಲಿತಾಂಶವನ್ನು ಮುದ್ರಣ, ಎಲೆಕ್ಟ್ರಾನಿಕ್ ಅಥವಾ ಇತರೆ ಮಾಧ್ಯಮಗಳಲ್ಲಿ ಪ್ರಕಟಿಸುವುದು ಕಾನೂನುಬಾಹಿರವಾಗಿದೆ.
ಈ ನಿಯಮವನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

