ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿ, ಬೆಂಗಳೂರಿನ ಭಯೋತ್ಪಾದನಾ ಸಂಬಂಧಿತ ಪ್ರಕರಣಗಳ ವಿಶೇಷ ನ್ಯಾಯಾಲಯವು ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಸಲ್ಲಿಸಿದ್ದ ತಪ್ಪೊಪ್ಪಿಗೆಯನ್ನು ಅಂಗೀಕರಿಸಿದೆ.
2022ರ ನವೆಂಬರ್ 19ರಂದು ಮಂಗಳೂರಿನಲ್ಲಿ ಆಟೋದಲ್ಲಿ ಸಂಭವಿಸಿದ್ದ ಸ್ಫೋಟವು ದೇಶದಾದ್ಯಂತ ಆತಂಕ ಮೂಡಿಸಿದ್ದು, ಭಯೋತ್ಪಾದನಾ ಸಂಪರ್ಕಗಳ ಬಗ್ಗೆ ಗಂಭೀರ ಶಂಕೆ ಹುಟ್ಟಿಸಿತ್ತು.

ಶಿವಮೊಗ್ಗ ಮೂಲದ 27 ವರ್ಷದ ಮೊಹಮ್ಮದ್ ಶಾರಿಕ್, 2024ರ ಏಪ್ರಿಲ್ 20ರಂದು ಪ್ರಕರಣ ವಿಚಾರಣೆಗೆ ಬಂದಾಗ ತನ್ನ ವಿರುದ್ಧದ ಭಯೋತ್ಪಾದನಾ ಆರೋಪಗಳನ್ನು ನಿರಾಕರಿಸಿದ್ದ. ಆದರೆ ನಂತರ 2025ರ ಡಿಸೆಂಬರ್ನಲ್ಲಿ ಅಚ್ಚರಿಯ ತಿರುವಾಗಿ ತಪ್ಪೊಪ್ಪಿಗೆ ಸಲ್ಲಿಸಿದ್ದಾನೆ.
ಮಾರ್ಚ್ 26ರಂದು ವಿಶೇಷ ನ್ಯಾಯಾಲಯ ಈ ಅರ್ಜಿಯನ್ನು ಅಧಿಕೃತವಾಗಿ ಅಂಗೀಕರಿಸಿದ್ದು, ಆರೋಪಿಯ ಹೇಳಿಕೆಯನ್ನು ಮರುದಾಖಲಿಸಲು ಪ್ರಕರಣವನ್ನು ಮುಂದಿನ ವಿಚಾರಣೆಗೆ ಮುಂದೂಡಿದೆ.

ಇದನ್ನೂ ಓದಿ: ಮಂಗಳೂರು: ಬಾವಿ ತೋಡುವಾಗ ಅವಘಡ; ಕಾರ್ಮಿಕ ಸಾವು
ನ್ಯಾಯಾಲಯ ತನ್ನ ಆದೇಶದಲ್ಲಿ, “ಸಿಆರ್ಪಿಸಿ ಸೆಕ್ಷನ್ 229ರ ಅಡಿಯಲ್ಲಿ ಆರೋಪಿ ಮೊಹಮ್ಮದ್ ಶಾರಿಕ್ ಸಲ್ಲಿಸಿದ ಅರ್ಜಿಯನ್ನು ಅನುಮೋದಿಸಲಾಗಿದೆ. ಈಗಾಗಲೇ 2024ರ ಏಪ್ರಿಲ್ 20ರಂದು ರೂಪಿಸಲಾದ ಆರೋಪಗಳನ್ನು ಮತ್ತೆ ಓದಿ ಆರೋಪಿಯ ತಪ್ಪೊಪ್ಪಿಗೆಯನ್ನು ದಾಖಲಿಸುವುದು ಅಗತ್ಯವಾಗಿದೆ” ಎಂದು ತಿಳಿಸಿದೆ.

ತಪ್ಪೊಪ್ಪಿಗೆಯನ್ನು ನ್ಯಾಯಾಲಯ ಅಂಗೀಕರಿಸಿರುವ ಹಿನ್ನೆಲೆಯಲ್ಲಿ, ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಗಳು ವೇಗ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

