ಬೆಂಗಳೂರು: ಐಪಿಎಲ್ 2026ರ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾದ ಆರ್ಸಿಬಿ ಮತ್ತು ಸಿಎಸ್ಕೆ ನಡುವಿನ ಹಣಾಹಣಿಯು ಈಗ ಮೈದಾನದಿಂದ ಬಿಸಿಸಿಐ ಅಂಗಳಕ್ಕೆ ತಲುಪಿದೆ. ಏಪ್ರಿಲ್ 5 ರಂದು ನಡೆದ ಪಂದ್ಯದ ವೇಳೆ ಆರ್ಸಿಬಿ ಮ್ಯಾನೇಜ್ಮೆಂಟ್ ಮತ್ತು ಡಿಜೆ ನಡೆಸಿಕೊಂಡ ರೀತಿ ಸರಿ ಇರಲಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ಆಕ್ರೋಶ ವ್ಯಕ್ತಪಡಿಸಿದೆ.
ಪಂದ್ಯದ ಸಮಯದಲ್ಲಿ ಕ್ರೀಡಾಂಗಣದ ಡಿಜೆ “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ” ಎಂಬ ಸಾಹಿತ್ಯವಿರುವ ಹಾಡನ್ನು ಪ್ಲೇ ಮಾಡಿದ್ದರು. ಇದು ತಮಿಳುನಾಡಿನ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಗೇಲಿ ಮಾಡುವಂತಿದೆ ಎಂದು ಸಿಎಸ್ಕೆ ದೂರಿದೆ. ಸಿಎಸ್ಕೆ ವ್ಯವಸ್ಥಾಪಕ ನಿರ್ದೇಶಕ ಕಾಶಿ ವಿಶ್ವನಾಥನ್ ಮಾತನಾಡಿ, “ಸಾಮಾನ್ಯವಾಗಿ ಡಿಜೆಗಳು ತವರು ತಂಡವನ್ನು ಬೆಂಬಲಿಸುತ್ತಾರೆ, ಆದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಮ್ಮ ಆಟಗಾರರ ವಿರುದ್ಧ ಅವಹೇಳನಕಾರಿ ಕಾಮೆಂಟ್ಗಳನ್ನು ಮಾಡಲಾಗಿದೆ. ಇದನ್ನು ನಾವು ಸಹಿಸುವುದಿಲ್ಲ,” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: IPL: ಲಕ್ನೋ ವಿರುದ್ಧ ತವರಿನಲ್ಲಿ ಗೆದ್ದು ಬೀಗಿದ ಆರ್ಸಿಬಿ
ಸಿಎಸ್ಕೆ ಅಭಿಮಾನಿಗಳ ಮೇಲೆ ಹಲ್ಲೆ ಮತ್ತು ಕ್ರೀಡಾಂಗಣದಲ್ಲಿ ಸರಿಯಾದ ಮನರಂಜನಾ ಶಿಷ್ಟಾಚಾರ ಪಾಲಿಸದ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಾಡಿನ ವಿವಾದ ಕಳೆದ ವರ್ಷವೇ ಆರಂಭವಾಗಿತ್ತು. ಆರ್ಸಿಬಿ ಆಟಗಾರ ಜಿತೇಶ್ ಶರ್ಮಾ ಈ ಹಾಡನ್ನು ಹಾಡಿದ್ದ ವಿಡಿಯೋ ವೈರಲ್ ಆಗಿದ್ದಾಗ ಸಿಎಸ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಈ ಬಾರಿ ಪಂದ್ಯದ ಪ್ರಮುಖ ಘಟ್ಟದಲ್ಲಿ (ಸಿಎಸ್ಕೆ 251 ರನ್ಗಳ ಗುರಿ ಬೆನ್ನಟ್ಟುತ್ತಿದ್ದಾಗ) ಈ ಹಾಡನ್ನು ಪ್ಲೇ ಮಾಡಿದ್ದು ಸಿಎಸ್ಕೆ ಮ್ಯಾನೇಜ್ಮೆಂಟ್ ಅನ್ನು ಕೆರಳಿಸಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

