ದೆಹಲಿ: ದೆಹಲಿಯ ಪ್ರತಿಷ್ಠಿತ ಈಸ್ಟ್ ಆಫ್ ಕೈಲಾಶ್ ಪ್ರದೇಶದಲ್ಲಿ ಐಆರ್ಎಸ್ ಅಧಿಕಾರಿಯ 22 ವರ್ಷದ ಪುತ್ರಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದ ಮಾಜಿ ಮನೆ ಕೆಲಸದವ ರಾಹುಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಯುವತಿ ಐಐಟಿ (IIT) ಪದವೀಧರೆಯಾಗಿದ್ದು, ಯುಪಿಎಸ್ಸಿ (UPSC) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಬುಧವಾರ ಸಂಜೆ ಮನೆಯಲ್ಲಿ ಯುವತಿ ಒಬ್ಬಳೇ ಇದ್ದಾಗ ಆರೋಪಿ ರಾಹುಲ್ ಒಳನುಗ್ಗಿದ್ದಾನೆ. ಪ್ರಾಥಮಿಕ ತನಿಖೆಯ ಪ್ರಕಾರ, ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಮೊಬೈಲ್ ಚಾರ್ಜರ್ ವೈರ್ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.

ಇಲ್ಲಿದೆ ನೋಡಿ ವಿಡಿಯೋ
ಆರೋಪಿ ರಾಹುಲ್ ಈ ಹಿಂದೆ ಇದೇ ಮನೆಯಲ್ಲಿ ಕೆಲಸಕ್ಕಿದ್ದನು. ಆದರೆ, ಇತರ ಕೆಲಸಗಾರರಿಂದ ಹಣ ಸಾಲ ಪಡೆದು ವಾಪಸ್ ನೀಡದ ಕಾರಣ ಹಾಗೂ ಇತರ ಶಿಸ್ತಿನ ಕ್ರಮಗಳ ಹಿನ್ನೆಲೆಯಲ್ಲಿ ಒಂದು ತಿಂಗಳ ಹಿಂದಷ್ಟೇ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಈ ದ್ವೇಷವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ.

ಪೊಲೀಸ್ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸತ್ಯವೊಂದು ಹೊರಬಂದಿದೆ. ದೆಹಲಿಯಲ್ಲಿ ಈ ಕೊಲೆ ಮಾಡುವ ಕೇವಲ 24 ಗಂಟೆಗಳ ಮೊದಲು, ಆರೋಪಿ ರಾಜಸ್ಥಾನದ ಅಲ್ವಾರ್ನಲ್ಲಿರುವ ತನ್ನ ಗ್ರಾಮದಲ್ಲಿ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಅಲ್ವಾರ್ನಲ್ಲಿ ಕೃತ್ಯ ಎಸಗಿದ ತಕ್ಷಣ ದೆಹಲಿಗೆ ಬಂದು ಈ ಹತ್ಯೆ ಮಾಡಿದ್ದಾನೆ. ತಾಂತ್ರಿಕ ಪುರಾವೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ದ್ವಾರಕಾ ಪ್ರದೇಶದ ಹೋಟೆಲ್ನಲ್ಲಿ ಅಡಗಿದ್ದ ರಾಹುಲ್ನನ್ನು ಬಂಧಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

