ಭುವನೇಶ್ವರ: ಬ್ಯಾಂಕ್ ಸಿಬ್ಬಂದಿ ಮರಣ ಪ್ರಮಾಣ ಪತ್ರ ಕೇಳಿದ್ದಕ್ಕೆ, ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನೇ ಬ್ಯಾಂಕ್ಗೆ ಹೊತ್ತು ತಂದಿರುವ ಆಘಾತಕಾರಿ ಘಟನೆ ಒಡಿಶಾದ ಕಿಯೋಂಜಾರ್ ಜಿಲ್ಲೆಯ ಪಟಾನಾ ಬ್ಲಾಕ್ನಲ್ಲಿ ನಡೆದಿದೆ.
ಬುಡಕಟ್ಟು ಸಮುದಾಯಕ್ಕೆ ಸೇರಿದ ಈ ವ್ಯಕ್ತಿಯ ಸಹೋದರಿ ಇತ್ತೀಚೆಗೆ ನಿಧನರಾಗಿದ್ದರು. ಅವರ ಬ್ಯಾಂಕ್ ಖಾತೆಯಲ್ಲಿದ್ದ ಉಳಿಕೆ ಹಣವನ್ನು ಪಡೆಯಲು ಈತ ಒಡಿಶಾ ಗ್ರಾಮೀಣ ಬ್ಯಾಂಕ್ನ ಮಾಲಿಪೋಸಿ ಶಾಖೆಗೆ ತೆರಳಿದ್ದ. ಈ ವೇಳೆ ಬ್ಯಾಂಕ್ ಸಿಬ್ಬಂದಿ, ಹಣ ನೀಡಲು ಮರಣ ಪ್ರಮಾಣ ಪತ್ರ (Death Certificate) ಹಾಗೂ ವಾರಸುದಾರರ ಪ್ರಮಾಣ ಪತ್ರ (Succession Certificate) ತರುವಂತೆ ಸೂಚಿಸಿದ್ದರು.

ಕಾನೂನು ಪ್ರಕ್ರಿಯೆಗಳ ಬಗ್ಗೆ ಅರಿವಿಲ್ಲದ ಹಾಗೂ ಹತಾಶೆಗೊಂಡಿದ್ದ ಆ ವ್ಯಕ್ತಿ, ಮರಣ ಪ್ರಮಾಣ ಪತ್ರಕ್ಕೆ ಸಾಕ್ಷಿಯಾಗಿ ಹೂತು ಹಾಕಿದ್ದ ತನ್ನ ಅಕ್ಕನ ಶವವನ್ನು ಅಗೆದು, ಅದರ ಅಸ್ಥಿಪಂಜರವನ್ನೇ ಬ್ಯಾಂಕ್ಗೆ ತಂದಿದ್ದಾನೆ. ಇದನ್ನು ಕಂಡು ಬ್ಯಾಂಕ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಸ್ಥಿಪಂಜರವನ್ನು ವಶಕ್ಕೆ ಪಡೆದು, ಗೌರವಯುತವಾಗಿ ಮತ್ತೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.ಕಿಯೋಂಜಾರ್ ಉಪಾಧಿಕಾರಿ ಉಮಾ ಶಂಕರ್ ದಲೈ ಅವರು ಪ್ರತಿಕ್ರಿಯಿಸಿದ್ದು, ರೆಡ್ ಕ್ರಾಸ್ ವತಿಯಿಂದ ಸಂತ್ರಸ್ತ ವ್ಯಕ್ತಿಗೆ 20,000 ರೂಪಾಯಿ ತಕ್ಷಣದ ನೆರವು ನೀಡಲಾಗಿದೆ.

ಇದನ್ನೂ ಓದಿ:ಹೋಟೆಲ್ ರೂಮ್ನಲ್ಲಿ ಮಗಳು-ಬಾಯ್ಫ್ರೆಂಡ್: ರೆಡ್ ಹ್ಯಾಂಡ್ ಆಗಿ ಹಿಡಿದ ತಾಯಿ! ವಿಡಿಯೋ ವೈರಲ್
ಮರಣ ಪ್ರಮಾಣ ಪತ್ರ ಮತ್ತು ವಾರಸುದಾರರ ಪ್ರಮಾಣ ಪತ್ರವನ್ನು ಶೀಘ್ರವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.ಈ ಘಟನೆಯು ಸರ್ಕಾರಿ ಪ್ರಕ್ರಿಯೆಗಳ ಸಂಕೀರ್ಣತೆ ಮತ್ತು ಗ್ರಾಮೀಣ ಭಾಗದ ಜನರಲ್ಲಿರುವ ಕಾನೂನು ಅರಿವಿನ ಕೊರತೆಯನ್ನು ಎತ್ತಿ ತೋರಿಸಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

