ಬಂಟ್ವಾಳ: ಮನೆಗೆ ನುಗ್ಗಿದ ಕಳ್ಳರು; ಚಿನ್ನ, ನಗದು ಮತ್ತು ಬೆಳ್ಳಿ ಕೃಷ್ಣ ಮೂರ್ತಿ ಕಳವು ಬಂಟ್ವಾಳ ತಾಲೂಕಿನ ಗೊರೇಮಾರ್ ಸಮೀಪದ ಪಚ್ಚಿನಡ್ಕ ನಿವಾಸಿ ಪ್ರಕಾಶ್ ಅವರ ಮನೆಯಲ್ಲಿ ಕಳ್ಳರು ದರೋಡೆ ನಡೆಸಿ ಚಿನ್ನಾಭರಣ, ನಗದು ಹಾಗೂ ಬೆಳ್ಳಿಯ ಕೃಷ್ಣ ಮೂರ್ತಿಯನ್ನು ಕಳವು ಮಾಡಿದ ಘಟನೆ ನಡೆದಿದೆ.
ಮನೆಯ ಮುಂಭಾಗದ ಬಾಗಿಲಿನ ಲ್ಯಾಚ್ ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನೊಳಗಿನ ಲಾಕರ್ನಲ್ಲಿ ಇಡಲಾಗಿದ್ದ ಸುಮಾರು 16 ಗ್ರಾಂ ತೂಕದ ಮೂರು ಜೋಡಿ ಚಿನ್ನದ ಕಿವಿಯೋಲೆಗಳು ಹಾಗೂ 18 ಗ್ರಾಂ ತೂಕದ ಮೂರು ಚಿನ್ನದ ಉಂಗುರಗಳನ್ನು ಕದ್ದೊಯ್ದಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು ₹4.13 ಲಕ್ಷ ಎಂದು ಅಂದಾಜಿಸಲಾಗಿದೆ. ಜೊತೆಗೆ ₹65,000 ನಗದು ಸಹ ಕಳುವಾಗಿದೆ.
ಇದನ್ನೂ ಓದಿ : ಎಂಟು ವರ್ಷಗಳಿಂದ ತರೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
ಅಷ್ಟೇ ಅಲ್ಲದೆ, ಪೂಜಾ ಕೊಠಡಿಯಲ್ಲಿ ಇಡಲಾಗಿದ್ದ ಸುಮಾರು ₹20,000 ಮೌಲ್ಯದ ಬೆಳ್ಳಿ ಕೃಷ್ಣ ಮೂರ್ತಿ ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು ₹5,000 ನಗದು ಕೂಡ ಕಳ್ಳರ ಕೈ ಸೇರಿದೆ.
ಪ್ರಕಾಶ್ ಅವರು ಕೇರಳದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಒಮ್ಮೆ ಊರಿಗೆ ಬರುತ್ತಿದ್ದರು. ಶಾಲೆಗಳಿಗೆ ರಜೆ ಇದ್ದ ಕಾರಣ ಪತ್ನಿ ಮತ್ತು ಮಕ್ಕಳು ಶಿವಮೊಗ್ಗಕ್ಕೆ ತೆರಳಿದ್ದರು. ಮನೆ ಬಾಗಿಲು ತೆರೆದಿರುವುದನ್ನು ಗಮನಿಸಿದ ನೆರೆಹೊರೆಯವರು ಕುಟುಂಬಕ್ಕೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಬಂಟ್ವಾಳ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ.


