ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಮೋಂತಿಮಾರಿನಲ್ಲಿರುವ ಶಬರಿಗಿರಿ ಅಯ್ಯಪ್ಪ ಭಕ್ತ ವೃಂದದ ಮಾಲಾಧಾರಿಗಳು ಇಂದು (ಜ.11) ಅಯ್ಯಪ್ಪನ ಆಲಯ ಶಬರಿಮಲೆಗೆ ತೆರಳಿದರು. ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಿಂದ ಪ್ರಯಾಣ ಬೆಳೆಸಿದರು.
ಶಬರಿಗಿರಿಯಲ್ಲಿ ಬೆಳಗ್ಗೆ ಶರಣು ಕರೆದ ನಂತರ ದೇವತಾ ಪ್ರಾರ್ಥನೆ ಮಾಡಲಾಯಿತು. ಬಳಿಕ 6 ಗಂಟೆಗೆ ಮೋಂತಿಮಾರು ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಭಜನಾ ಕಾರ್ಯಕ್ರಮ ನಡೆದು 8.30ಕ್ಕೆ ಅಯ್ಯಪ್ಪ ದೇವರಿಗೆ ಮಹಾಮಂಗಳಾರತಿ ನಡೆಯಿತು.


ಬೆಳಗ್ಗೆ 10.30ರ ನಂತರ ಅಯ್ಯಪ್ಪ ಮಾಲಾಧಾರಿಗಳಿಗೆ ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆಯಿತು. ಮೂವರು ಸ್ವಾಮಿಗಳು ಇರುಮುಡಿ ಕಟ್ಟುವ ಕಾರ್ಯ ನಡೆಸಿದರು. ಶಬರಿಗಿರಿಯಲ್ಲಿ ನಡೆದ ಸತ್ಯನಾರಾಯಣ ಪೂಜೆಯ ಮಹಾಮಂಗಳಾರತಿ ನಡೆದು ಪ್ರಸಾದ ವಿತರಣೆ ನಡೆಯಿತು.

ಇದನ್ನೂ ಓದಿ: ಪುತ್ತೂರಿನಲ್ಲಿ ಉದ್ಘಾಟನೆಗೊಂಡ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ-ಸಸ್ಯ ಜಾತ್ರೆ

ನಂತರ ಮೋಂತಿಮಾರು ಶ್ರೀ ಕ್ಷೇತ್ರದಲ್ಲಿ ಅನ್ನಸಂತರ್ಪಣೆ ನಡೆಯಿತು. ಸುಮಾರು 500ಕ್ಕೂ ಅಧಿಕ ಭಕ್ತರು ದೇವರ ಅನುಗ್ರಹಕ್ಕೆ ಪಾತ್ರರಾದರು.

ಗುರುಸ್ವಾಮಿ ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ಒಟ್ಟು 23 ಮಂದಿ ಅಯ್ಯಪ್ಪ ಮಾಲಾಧಾರಿಗಳು ಸಂಜೆ 6 ಗಂಟೆಗೆ ಶಬರಿಮಲೆ ಯಾತ್ರೆ ಕೈಗೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

