ಬೆಂಗಳೂರು: ಕರ್ನಾಟಕ ರಾಜಕೀಯ ಇತಿಹಾಸದಲ್ಲೇ ಅತ್ಯಂತ ರೋಮಾಂಚನಕಾರಿ ಹಾಗೂ ನಾಟಕೀಯ ಬೆಳವಣಿಗೆಯೊಂದು ಜರುಗಿದೆ. ರಾಜ್ಯದ ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಸಿಎಂ ಸಿದ್ದರಾಮಯ್ಯ (Siddaramaiah) ಅವರ ರಾಜೀನಾಮೆ ಸನ್ನಿಹಿತವಾಗಿದೆ ಎಂಬ ಚರ್ಚೆಗಳ ಬೆನ್ನಲ್ಲೇ ರಾಜ್ಯಪಾಲರು ದಿಢೀರ್ ಹೊರರಾಜ್ಯ ಪ್ರವಾಸ ಕೈಗೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮೇ 28, ಗುರುವಾರ) ಬೆಳಗ್ಗೆ ರಾಜ್ಯಪಾಲರ ಭೇಟಿಗೆ ಅಧಿಕೃತವಾಗಿ ಸಮಯ ಕೇಳಿದ್ದಾರೆ. ಆದರೆ, ಇದೇ ಹೊತ್ತಿನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawarchand Gehlot) ಅವರು ಬುಧವಾರ ಮಧ್ಯರಾತ್ರಿ ತುರ್ತಾಗಿ ಮುಂಬೈಗೆ ಪ್ರಯಾಣ ಬೆಳೆಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ರಾಜಕೀಯ ಮೂಲಗಳ ಪ್ರಕಾರ, ತಮ್ಮ ಅತ್ಯಾಪ್ತ ಸಂಬಂಧಿಕರೊಬ್ಬರ ತೀವ್ರ ಅನಾರೋಗ್ಯದ ಕಾರಣ ನೀಡಿ ರಾಜ್ಯಪಾಲರು ನಿನ್ನೆ ರಾತ್ರಿ 11.45ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಮುಂಬೈಗೆ ತೆರಳಿದ್ದಾರೆ. ರಾತ್ರಿ ಮುಂಬೈನಲ್ಲಿ ತಂಗಿರುವ ಅವರು, ಇಂದು ಬೆಳಗ್ಗೆ ಮಧ್ಯಪ್ರದೇಶದ ಇಂದೋರ್ಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ರಾಜ್ಯದಲ್ಲಿ ಇಷ್ಟೊಂದು ದೊಡ್ಡ ರಾಜಕೀಯ ಬಿಕ್ಕಟ್ಟು ಹಾಗೂ ಮುಖ್ಯಮಂತ್ರಿಗಳ ಬದಲಾವಣೆಯ ಪ್ರಕ್ರಿಯೆ ನಡೆಯುತ್ತಿರುವಾಗಲೇ ರಾಜ್ಯಪಾಲರು ದಿಢೀರ್ ಪ್ರವಾಸ ಕೈಗೊಂಡಿರುವುದು ಕೇವಲ ಕೌಟುಂಬಿಕ ಕಾರಣವೇ? ಅಥವಾ ಇದರ ಹಿಂದೆ ಬೇರೆನಾದರೂ ರಾಜಕೀಯ ರಣತಂತ್ರವಿದೆಯೇ? ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ಇದನ್ನೂ ಓದಿ;ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ: ಒಳಮೀಸಲಾತಿಗೆ ಸಚಿವ ಪರಮೇಶ್ವರ್ ವಿರೋಧ
ಮುಂದೇನು?: ಸಿಎಂ ರಾಜೀನಾಮೆ ಸಲ್ಲಿಕೆ ವಿಳಂಬ ಸಾಧ್ಯತೆ?:
ಒಂದು ಕಡೆ ಹೈಕಮಾಂಡ್ ಸೂಚನೆಯಂತೆ ಸಿಎಂ ಸಿದ್ದರಾಮಯ್ಯ ಅವರು ಇಂದು ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ, ಈಗ ರಾಜಭವನದಲ್ಲಿ ರಾಜ್ಯಪಾಲರೇ ಇಲ್ಲದಿರುವುದರಿಂದ ರಾಜೀನಾಮೆ ಸಲ್ಲಿಕೆ ಪ್ರಕ್ರಿಯೆ ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ. ರಾಜ್ಯಪಾಲರ ಅನುಪಸ್ಥಿತಿಯಲ್ಲಿ ನೆರೆಯ ರಾಜ್ಯದ ಗವರ್ನರ್ಗೆ ಉಸ್ತುವಾರಿ ಜವಾಬ್ದಾರಿ ಸಿಗಲಿದೆಯೇ ಅಥವಾ ಗೆಹ್ಲೋಟ್ ಅವರೇ ವಾಪಸ್ ಬಂದ ಬಳಿಕ ಪ್ರಕ್ರಿಯೆಗಳು ನಡೆಯಲಿವೆಯೇ ಎಂಬುದನ್ನು ಕಾದುನೋಡಬೇಕಿದೆ. ಸದ್ಯ ಬೆಂಗಳೂರಿನಿಂದ ಹಿಡಿದು ದೆಹಲಿವರೆಗಿನ ರಾಜಕೀಯ ನಾಯಕರ ಕಣ್ಣು ಈಗ ಕರ್ನಾಟಕದ ಮೇಲೆಯೇ ನೆಟ್ಟಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


