ಬಂಟ್ವಾಳ: ದೈವದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ಮನೆಯ ಹೊರಗಡೆ ಮದ್ಯಪಾನ ಮಾಡಿ ಗಲಾಟೆ ಮಾಡುವುದನ್ನು ಆಕ್ಷೇಪಿಸಿದ ಕಾರಣಕ್ಕೆ, 23 ವರ್ಷದ ಯುವಕನೊಬ್ಬ ತನ್ನ ಸ್ವಂತ ದೊಡ್ಡಪ್ಪನ ಕುತ್ತಿಗೆಗೆ ಬೀರ್ ಬಾಟಲಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕಡಬೆಟ್ಟು ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಕೊಲೆಯಾದ ದುರ್ದೈವಿಯನ್ನು ಕಡಬೆಟ್ಟು ನಿವಾಸಿ ಮಧುಸೂದನ್ ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿದ ಆರೋಪಿಯನ್ನು ಮಧುಸೂದನ್ ಅವರ ತಮ್ಮ ಕೇಶವ ಪೂಜಾರಿ ಅವರ ಮಗ ರಾಹುಲ್ (23) ಎಂದು ಗುರುತಿಸಲಾಗಿದ್ದು, ಇದೀಗ ಈತ ತಲೆಮರೆಸಿಕೊಂಡಿದ್ದಾನೆ.
ಕಡಬೆಟ್ಟುವಿನ ಕೇಶವ ಪೂಜಾರಿ ಅವರ ಮನೆಯಲ್ಲಿ ಭಾನುವಾರ ರಾತ್ರಿ ದೈವದ ‘ತಂಬಿಲ’ ಸೇವೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮನೆಯೊಳಗೆ ಧಾರ್ಮಿಕ ವಿಧಿವಿಧಾನಗಳು ಭರದಿಂದ ಸಾಗುತ್ತಿದ್ದಾಗ, ಮನೆಯ ಹೊರಗಡೆ ಆರೋಪಿ ರಾಹುಲ್ ಮತ್ತು ಆತನ ಸ್ನೇಹಿತರು ಮದ್ಯಪಾನ ಮಾಡುತ್ತಾ ಸಾರ್ವಜನಿಕವಾಗಿ ರಂಪಾಟ ಮಾಡುತ್ತಿದ್ದರು. ಇದನ್ನು ಗಮನಿಸಿದ ಮಧುಸೂದನ್ ಅವರು ಧಾರ್ಮಿಕ ಕಾರ್ಯಕ್ರಮದ ಜಾಗದಲ್ಲಿ ಇಂತಹ ಅಸಭ್ಯ ವರ್ತನೆ ಮಾಡದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:Bantwal: ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಚಿಕ್ಕಮಗಳೂರು ಜೈಲಿಗೆ ಸ್ಥಳಾಂತರ
ಇದರಿಂದ ತೀವ್ರ ಕೆರಳಿದ ರಾಹುಲ್, ತಕ್ಷಣವೇ ಕೈಯಲ್ಲಿದ್ದ ಬೀರ್ ಬಾಟಲಿಯನ್ನು ಒಡೆದು ದೊಡ್ಡಪ್ಪ ಮಧುಸೂದನ್ ಅವರ ಕುತ್ತಿಗೆಗೆ ಬಲವಾಗಿ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಧುಸೂದನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಕೃತ್ಯ ಎಸಗಿದ ತಕ್ಷಣ ಆರೋಪಿ ರಾಹುಲ್ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಜಾಲ ಬೀಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


