ಪುತ್ತೂರು: ತಾಲೂಕಿನಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಕಡಿತ ಮಾಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಶಾಸಕ ಸಂಜೀವ ಮಠಂದೂರು, ಸಮಸ್ಯೆ ಬಗೆಹರಿಸದಿದ್ದರೆ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಂಜೀವ ಮಠಂದೂರು ನೇತೃತ್ವದ ನಿಯೋಗ ಮೆಸ್ಕಾಂ ಪುತ್ತೂರು ಕಚೇರಿಗೆ ಭೇಟಿ ನೀಡಿ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ ಎ. ಅವರಿಗೆ ಮನವಿ ಪತ್ರ ನೀಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
ಮಳೆಗಾಲ ಆರಂಭ ಆಗುವ ಮುನ್ನವೇ ಪುತ್ತೂರು ತಾಲೂಕಿನ ಬಹುತೇಕ ಭಾಗದಲ್ಲಿ ವಿದ್ಯುತ್ ವಾರ ಗಟ್ಟಲೆ ಕಡಿತ ಆಗಿ ಜನ ಸಾಮಾನ್ಯರು ಕುಡಿಯುವ ನೀರಿಗೆ ಬವಣೆ ಪಡುವಂತ ಸ್ಥಿತಿ ನಿರ್ಮಾಣ ಆಗಿದೆ. ಮಳೆಗಾಲದಲ್ಲಿ ಸಹಜವಾಗಿ ವಿದ್ಯುತ್ ಕಡಿತವಾಗುತ್ತದೆ. ಆದರೆ ಈ ಬಾರಿ ಗಾಳಿ, ಮಳೆ, ಸಿಡಿಲು ಇಲ್ಲದೇ ಇದ್ದರೂ ವಿದ್ಯುತ್ ಕೈ ಕೊಡುತ್ತದೆ.
ಉಪ್ಪಿನಂಗಡಿ ಭಾಗದಲ್ಲಿ ಒಂದು ವಾರದ ಹಿಂದೆ ನಿರಂತರ ವಿದ್ಯುತ್ ಕಂಬಗಳು ಉರುಳಿ ಒಂದುವಾರ ಲೈನ್ಮ್ಯಾನ್ಗಳ ಸಮಸ್ಯೆಯಿಂದ ವಿದ್ಯುತ್ ಕಡಿತ ಆಗಿದೆ. ನಿನ್ನೆ ಕಬಕ ಭಾಗದಲ್ಲಿ ವಿದ್ಯುತ್ ಸಮಸ್ಯೆಗೆ ರಾತ್ರಿ ಕ್ಯಾಂಡಲ್ ಪ್ರತಿಭಟನೆ ಆಗಿದೆ. ಪುತ್ತೂರಿನಲ್ಲಿರುವ ಲೈನ್ಮ್ಯಾನ್ಗಳ ವರ್ಗಾವಣೆ ಮಾಡಿರುವ ಪರಿಣಾಮ ಇವತ್ತು ಪುತ್ತೂರಿನಲ್ಲಿ ಯಾವುದೇ ವಿದ್ಯುತ್ ದುರಸ್ತಿ ಕಾರ್ಯ ಆಗುತ್ತಿಲ್ಲ.
ಮಳೆ ಬರುವ ಮುಂಚೆ ಗಿಡ ಮರಗಳ ರೆಂಬೆ, ಕೊಂಬೆ ತುಂಡರಿಸುವ ಕೆಲಸ ಆಗಿಲ್ಲ. ಅಪಾಯಕಾರಿ ಮರಗಳು ವಿದ್ಯುತ್ ಲೈನಿಗೆ ಬೀಳುವ ಸಂಭವ ಇದ್ದರೂ ಅದನ್ನು ಹಾಗೆ ಬಿಟ್ಟು ಬಿಡುವ ಪರಿಸ್ಥಿತಿ ಇದೆ. ಕಂಬಗಳು ಹಾಗೂ ಲೈನ್ ದುರಸ್ತಿ ಕಾರ್ಯ ಕೂಡಾ ನಡೆದಿಲ್ಲ. ಇದರ ಪರಿಣಾಮ ವಿದ್ಯುತ್ ಕಡಿತ ಆಗಿರುತ್ತದೆ.
ಹಿಂದಿನ ಸರಕಾರ ಟಿಸಿ ಬ್ಯಾಂಕ್ ಆರಂಭ ಮಾಡಿತ್ತು. ಆದರೆ ಇಂದು ಟ್ರಾನ್ಸ್ಫಾರ್ಮರ್ ಕೆಟ್ಟು ಹೋದರೆ ಒಂದು ವಾರ ಆದರೂ ಪರಿವರ್ತಕ ಆಳವಡಿಸುವುದಿಲ್ಲ. ಗುತ್ತಿಗೆಯನ್ನು ಯಾರೋ ಹೊರ ಜಿಲ್ಲೆಯವರಿಗೆ ಕೊಡುವ ಮುಖಾಂತರ ಸ್ಥಳೀಯ ಗುತ್ತಿಗೆದಾರರು ಸಣ್ಣ ಪುಟ್ಟ ಕೆಲಸ ಮಾಡಲು ಮುಂದೆ ಬರುತ್ತಿಲ್ಲ.
ತಕ್ಷಣ ಲೈನ್ಮ್ಯಾನ್ಗಳ ನೇಮಕ, ಪರಿವರ್ತಕಗಳ ದುರಸ್ತಿ, ವಿದ್ಯುತ್ ಲೈನ್ಗಳು ಹಾದು ಹೋಗುವಲ್ಲಿ ಮರಗಳ ಕೊಂಬೆ ರೆಂಬೆ ಕತ್ತರಿಸುವ ಕೆಲಸ ಹಾಗೂ 24/7 ಮೆಸ್ಕಾಂ ಸಹಾಯವಾಣಿ ಕೆಂದ್ರ ಮಾಡಬೇಕು ಮತ್ತು ಪುತ್ತೂರು ಉಪ ವಿಭಾಗದಲ್ಲಿ ಒಂದು ವಾರದ ಒಳಗಡೆ ವಿದ್ಯುತ್ ಸಮಸ್ಯೆ ಬಗೆಹರಿಸದೇ ಇದ್ದರೆ ಭಾರತೀಯ ಜನತಾ ಪಾರ್ಟಿಯಿಂದ (ಬಿಜೆಪಿ) ಉಗ್ರ ಹೋರಾಟವನ್ನು ಮೆಸ್ಕಾಂ ಕಛೇರಿ ಎದುರು ಮಾಡಲಿದ್ದೇವೆ ಎಂದು ಮಠಂದೂರು ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ


