ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಎಟಿಎಂ ವ್ಯಾನ್ನಿಂದ 7.11 ಕೋಟಿ ರೂಪಾಯಿ ದರೋಡೆ ಮಾಡಿದ ಪ್ರಕರಣ ಸಂಬಂಧ ಸಿದ್ಧಾಪುರ ಪೊಲೀಸರು ತನಿಖೆ ಪೂರ್ಣಗೊಳಿಸಿ, ಒಂಬತ್ತು ಆರೋಪಿಗಳ ವಿರುದ್ಧ 1,328 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಕಳೆದ ನವೆಂಬರ್ನಲ್ಲಿ, ಆರ್ಬಿಐ ಅಧಿಕಾರಿಗಳಂತೆ ನಟನೆ ಮಾಡಿದ ದರೋಡೆಕೋರರ ಗುಂಪು ಸಿಎಂಒ ಇನ್ಫೋ ಸಿಸ್ಟಮ್ ಕ್ಯಾಶ್ ವ್ಯಾನ್ ತಡೆದು 7.11 ಕೋಟಿ ರೂಪಾಯಿಗಳನ್ನು ದೋಚಿಕೊಂಡು ಪರಾರಿಯಾಗಿತ್ತು. ಈ ಹಣವನ್ನು ವಿವಿಧ ಎಟಿಎಂಗಳಿಗೆ ಠೇವಣಿ ಮಾಡಲು ಸಾಗಿಸಲಾಗುತ್ತಿತ್ತು.

ಘಟನೆಯ ನಂತರ, ಪೊಲೀಸರು ತೀವ್ರ ತನಿಖೆ ಆರಂಭಿಸಿ ಕೇವಲ 54 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪ ನಾಯಕ್, ಕ್ಯಾಶ್ ಲಾಜಿಸ್ಟಿಕ್ಸ್ ಕಂಪನಿಯ ಮಾಜಿ ಉದ್ಯೋಗಿ ಜೆ ಜೇವಿಯರ್, ಫ್ಲೀಟ್ ಮ್ಯಾನೇಜರ್ ಗೋಪಾಲ್ ಪ್ರಸಾದ್ ಅಲಿಯಾಸ್ ಗೋಪಿ ಸೇರಿದಂತೆ ಒಟ್ಟು ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: 1 ಸಾವಿರ ರೂ.ಗೆ ಪತ್ನಿಯನ್ನೇ ಮಾರಿದ ಪತಿ! ಬಳಿಕ ನಡೆದಿದ್ದೇ ಅಮಾನವೀಯ ಕೃತ್ಯ
ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರಡಿ ದರೋಡೆ, ಸಾಕ್ಷ್ಯ ನಾಶ, ಅಪರಾಧ ಸಂಚು ಹಾಗೂ ಬೆದರಿಕೆ ಸೇರಿದಂತೆ ಹಲವು ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 129 ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ತಾಂತ್ರಿಕ ಹಾಗೂ ಫಾರೆನ್ಸಿಕ್ ಸಾಕ್ಷ್ಯಗಳು, ಬೆರಳಚ್ಚುಗಳ ಮೂಲಕ ಆರೋಪಿಗಳನ್ನು ಪತ್ತೆಹಚ್ಚಲಾಗಿತ್ತು. ಈ ಹೈ-ಪ್ರೊಫೈಲ್ ದರೋಡೆ ಪ್ರಕರಣದಲ್ಲಿ ಸಲ್ಲಿಸಲಾದ 1,328 ಪುಟಗಳ ಚಾರ್ಜ್ಶೀಟ್ನ್ನು 56ನೇ ಎಸಿಎಮ್ಎಂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

