ಪುತ್ತೂರು: ಪುತ್ತೂರು ತಾಲೂಕು ಧರ್ಮ ಶಿಕ್ಷಣ ಸಮಿತಿ ‘ಧರ್ಮಾಭ್ಯುದಯ’ದ ಸಾಮಾನ್ಯ ಸಭೆಯು ತೆಂಕಿಲದ ಸ್ವಾಮಿ ಕಲಾ ಮಂದಿರದಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು. ಸಭೆಯ ಉದ್ದೇಶ ಉದ್ದೇಶಿಸಿ ಮಾತನಾಡಿದ ಸಮಿತಿಯ ಸಂಚಾಲಕ ಸುಬ್ರಮಣ್ಯ ನಟ್ಟೋಜ ಅವರು, ಶೃಂಗೇರಿ ಜಗದ್ಗುರುಗಳ ಪ್ರೇರಣೆ, ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ಧರ್ಮ ಶಿಕ್ಷಣ ವ್ಯವಸ್ಥೆಯು ಅತ್ಯಂತ ಸದೃಢವಾಗಿ ಸಾಗುತ್ತಿದೆ. ಇದರಿಂದ ಹಿಂದೂ ಸಮಾಜದ ಮಕ್ಕಳಿಗೆ ನಮ್ಮ ಆಚಾರ, ವಿಚಾರ ಹಾಗೂ ಪರಂಪರೆಯ ಸಂಸ್ಕಾರಗಳು ದೊರೆಯುತ್ತಿವೆ ಎಂದರು.
ಕಳೆದ ಒಂದು ವರ್ಷದಿಂದ ಪುತ್ತೂರು ಭಾಗದ ವಿವಿಧೆಡೆ ನಿರಂತರವಾಗಿ ಧರ್ಮ ಶಿಕ್ಷಣ ತರಗತಿಗಳು ನಡೆಯುತ್ತಿದ್ದು, ಅಸಂಖ್ಯ ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ. ಈ ಕಾರ್ಯವನ್ನು ಕೇವಲ ಪುತ್ತೂರಿಗೆ ಸೀಮಿತಗೊಳಿಸದೆ ಮತ್ತಷ್ಟು ವ್ಯಾಪಕಗೊಳಿಸಲು ನಿರ್ಧರಿಸಲಾಗಿದೆ. ಧರ್ಮ ಶಿಕ್ಷಣ ಪ್ರಚಾರವನ್ನು ವೇಗಗೊಳಿಸುವ ಸಲುವಾಗಿ, ಸೂಕ್ತ ಸಂಭಾವನೆಯೊಂದಿಗೆ ಓರ್ವ ಧರ್ಮ ಶಿಕ್ಷಣ ಪ್ರಸಾರಕರನ್ನು ಸದ್ಯದಲ್ಲೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಸುಬ್ರಮಣ್ಯ ನಟ್ಟೋಜ ತಿಳಿಸಿದರು.
ಧರ್ಮಾಭ್ಯುದಯದ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಮಾತನಾಡಿ, ಪುತ್ತೂರು ಸೇರಿದಂತೆ ವಿವಿಧ ಭಾಗಗಳ ಭಜನಾ ಮಂದಿರಗಳು ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡಿ ಧರ್ಮ ಶಿಕ್ಷಣ ತರಗತಿಗಳನ್ನು ಆರಂಭಿಸುವ ಅಗತ್ಯವಿದೆ. ಶೃಂಗೇರಿ ಜಗದ್ಗುರುಗಳು ತೋರಿದ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ಕರೆ ನೀಡಿದರು.
ಇದನ್ನೂ ಓದಿ: ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ: ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ
ಈ ಕಾರ್ಯಕ್ರಮದಲ್ಲಿ ಧರ್ಮಾಭ್ಯುದಯದ ಉಪಾಧ್ಯಕ್ಷ ಜಯಸೂರ್ಯ ರೈ ಮಾದೋಡಿ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್, ಕಾರ್ಯದರ್ಶಿ ಶೈಲೇಶ್ ಜಿ. ರಾವ್, ಖಜಾಂಜಿ ಮಾಧವ ಸ್ವಾಮಿ, ಹಾಗೂ ಸದಸ್ಯರಾದ ಶಿವಕುಮಾರ್ ಪಡುಮಲೆ, ಕವಿತಾ ಎಚ್. ರೈ, ರಚನಾ ಕೆ, ಸವಿತಾ ಎಸ್, ಪಾರ್ವತಿ ಸುಮ, ಗಣೇಶ ಪ್ರಸಾದ್ ಎ, ಮಾಧವ ನಾಯಕ್ ಕೆ ಮತ್ತು ರಾಕೇಶ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು.
ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

