ಬೆಂಗಳೂರು: ದೇಶದ ಭದ್ರತೆ ಮತ್ತು ಶಾಂತಿಯ ದೃಷ್ಟಿಯಿಂದ ಬೆಂಗಳೂರಿನ ಐತಿಹಾಸಿಕ ಸಿಟಿ ಮಾರ್ಕೆಟ್ ಜಾಮಿಯಾ ಮಸೀದಿಯ ಮುಖ್ಯ ಇಮಾಮ್ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ಅವರು ಮುಸ್ಲಿಂ ಸಮುದಾಯಕ್ಕೆ ಅತ್ಯಂತ ಕಠಿಣ ಹಾಗೂ ಸ್ಪಷ್ಟ ಸಂದೇಶವೊಂದನ್ನು ನೀಡಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಲೆಮರೆಸಿಕೊಂಡಿರುವ ಕೆಲವು ಭಯೋತ್ಪಾದಕರ ಪತ್ತೆಗಾಗಿ ಬಹುಮಾನ ಘೋಷಿಸಿರುವ ಬೆನ್ನಲ್ಲೇ ಇಮಾಮ್ ಈ ಹೇಳಿಕೆ ನೀಡಿದ್ದಾರೆ.
“ಯಾವುದೇ ವ್ಯಕ್ತಿ ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿದ್ದರೆ ಅಥವಾ ಶಂಕಿತ ಉಗ್ರರ ಬಗ್ಗೆ ನಿಮಗೆ ಮಾಹಿತಿ ಇದ್ದರೆ, ಕೇವಲ ಘೋಷಿತ ಬಹುಮಾನದ ಹಣದ ಆಸೆಗಾಗಿ ಅಲ್ಲದೆ, ದೇಶದ ಮೇಲಿನ ಜವಾಬ್ದಾರಿಯಿಂದ ಕೂಡಲೇ ಎನ್ಐಎಗೆ ಮಾಹಿತಿ ನೀಡಿ” ಎಂದು ಅವರು ಕರೆ ನೀಡಿದ್ದಾರೆ. ಇಸ್ಲಾಂ ಧರ್ಮವು ಅಮಾಯಕರ ಕೊಲೆಯನ್ನು ಬೆಂಬಲಿಸುವುದಿಲ್ಲ. ದೇಶದ ವಿರುದ್ಧ ಸಂಚು ರೂಪಿಸುವವರು ಯಾರೇ ಆಗಿರಲಿ, ಅಂತಹವರನ್ನು ರಕ್ಷಿಸುವುದು ಅಥವಾ ಮೌನವಾಗಿರುವುದು ಧರ್ಮವಲ್ಲ ಎಂದು ಅವರು ಪ್ರವಚನದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಎಟಿಎಂಗೆ ಹಾಕಿದ 3.40 ಕೋಟಿ ರೂ. ಹಣ ಮಾಯ! ಸಿಬ್ಬಂದಿಗಳ ಕೈಚಳಕ ಹೇಗಿತ್ತು ನೋಡಿ
ಸಾಮಾಜಿಕ ಜಾಲತಾಣಗಳ ಮೂಲಕ ದಾರಿ ತಪ್ಪಿಸುವ ಶಕ್ತಿಗಳ ಬಗ್ಗೆ ಯುವಜನತೆ ಜಾಗರೂಕರಾಗಿರಬೇಕು. ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಎಂದು ಅವರು ಒತ್ತಿ ಹೇಳಿದ್ದಾರೆ. ಧಾರ್ಮಿಕ ಕೇಂದ್ರವೊಂದರಿಂದ ಇಂತಹದೊಂದು ಪ್ರಕಟಣೆ ಬಂದಿರುವುದು ತನಿಖಾ ಸಂಸ್ಥೆಗಳಿಗೆ ದೊಡ್ಡ ಬಲ ನೀಡಿದಂತಾಗಿದೆ. ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲು ಸಮುದಾಯದ ಸಹಕಾರ ಅತಿ ಮುಖ್ಯ ಎಂದು ಇಮಾಮ್ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

