ಕೊಯಿಲ: ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆ ಹಾಗೂ ದೇಶಭಕ್ತಿಯಿಂದ ಆಚರಿಸಲಾಯಿತು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ (SDMC) ಕಾರ್ಯಾಧ್ಯಕ್ಷರಾದ ಶ್ರೀ ದುರ್ಗಾದಾಸ್ ಶೆಟ್ಟಿ ಮಾವಂತೂರು ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣದ ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ದುರ್ಗಾದಾಸ್ ಶೆಟ್ಟಿ ಅವರು, “ಪ್ರಸ್ತುತ ದಿನಗಳಲ್ಲಿ ಯುವಪೀಳಿಗೆ ಹಾಗೂ ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ಅವಶ್ಯಕತೆ ಹೆಚ್ಚಾಗಿದೆ. ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ನಡೆದು ದೇಶದ ಉತ್ತಮ ನಾಗರಿಕರಾಗಬೇಕು,” ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಸಮಿತಿಯ ಸದಸ್ಯರಾದ ಶ್ರೀ ರವೀಂದ್ರ ಬದನಡಿ, ಶ್ರೀ ಸುರೇಶ್ ರಾಯಿ, ಪೋಷಕರಾದ ಶ್ರೀ ಪದ್ಮನಾಭ ಗೌಡ, ಶ್ರೀ ಪುರುಷೋತ್ತಮ, ನಿವೃತ್ತ ಶಿಕ್ಷಕರಾದ ಶ್ರೀ ರಮೇಶ್ ಮಯ್ಯ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸೌಜನ್ಯ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಜನಾರ್ದನ್ ಅವರು ಸರ್ವರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಗಣಿತ ಶಿಕ್ಷಕಿ ಶ್ರೀಮತಿ ಸೌಮ್ಯ ಧನ್ಯವಾದ ಸಮರ್ಪಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ದೀಪ್ತಿ ಅತಿಕಾರಿ ಇಡೀ ಕಾರ್ಯಕ್ರಮವನ್ನು ನಿರೂಪಿಸಿ ನಡೆಸಿಕೊಟ್ಟರು. ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ದಿನದ ಮಹತ್ವದ ಕುರಿತು ಆಕರ್ಷಕ ಭಾಷಣ, ದೇಶಭಕ್ತಿ ಗೀತೆ ಗಾಯನ ಹಾಗೂ ವರ್ಣರಂಜಿತ ನೃತ್ಯ ಪ್ರದರ್ಶನಗಳು ಜರುಗಿದವು.

