ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯ ಅಗೆಯುವಾಗ ಸಿಕ್ಕ ಅಪಾರ ಮೌಲ್ಯದ ಚಿನ್ನದ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದ ಬಾಲಕ ಪ್ರಜ್ವಲ್ ರಿತ್ತಿಗೆ ಈಗ ಸರ್ಕಾರದ ವತಿಯಿಂದ ಬಂಪರ್ ಗಿಫ್ಟ್ ಸಿಕ್ಕಿದೆ. ಪ್ರಜ್ವಲ್ನ ಈ ಪ್ರಾಮಾಣಿಕ ಕಾರ್ಯವನ್ನು ಮೆಚ್ಚಿ ರಾಜ್ಯ ಸರ್ಕಾರವು ಆತನ ಕುಟುಂಬಕ್ಕೆ ನಿವೇಶನ (Site) ನೀಡುವುದಾಗಿ ಘೋಷಿಸಿದೆ. ಜನವರಿ 10, 2026 ರಂದು ಪ್ರಜ್ವಲ್ ರಿತ್ತಿ ತನ್ನ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಿಸಲು ಪಾಯ ಅಗೆಯುತ್ತಿದ್ದಾಗ ಸುಮಾರು 470 ರಿಂದ 520 ಗ್ರಾಂ ತೂಕದ ಪುರಾತನ ಚಿನ್ನಾಭರಣಗಳು ಮತ್ತು ನಾಣ್ಯಗಳಿದ್ದ ತಾಮ್ರದ ಬಿಂದಿಗೆ ಪತ್ತೆಯಾಗಿತ್ತು.
ಮನೆಯವರು ಆ ಹಣವನ್ನು ತಾವೇ ಇಟ್ಟುಕೊಳ್ಳುವ ಬದಲು, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಇಡೀ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದರು. ಈ ಚಿನ್ನವು ಸುಮಾರು 300 ರಿಂದ 400 ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ.ಪ್ರಜ್ವಲ್ನ ಪ್ರಾಮಾಣಿಕತೆಯನ್ನು ಇಡೀ ನಾಡೇ ಕೊಂಡಾಡಿತ್ತು. ಸಚಿವ ಎಚ್.ಕೆ. ಪಾಟೀಲ್ ಅವರು ಪ್ರಜ್ವಲ್ ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದರು. ಪ್ರಜ್ವಲ್ ಕುಟುಂಬಕ್ಕೆ ಸುಸಜ್ಜಿತ ನಿವೇಶನವನ್ನು ಸರ್ಕಾರದಿಂದ ನೀಡಲಾಗಿದೆ.

ಇದನ್ನೂ ಓದಿ : ಲಕ್ಕುಂಡಿ : ಬಗೆದಷ್ಟು ಸಿಗುತ್ತಿರುವ ನಿಧಿ’ ಸಂರಕ್ಷಣೆಗೆ ಆಗ್ರಹ
ಬಾಲಕನ ಮುಂದಿನ ಶಿಕ್ಷಣಕ್ಕೆ ಸರ್ಕಾರದಿಂದ ಆರ್ಥಿಕ ನೆರವು ಘೋಷಿಸಲಾಗಿದೆ.ಪ್ರಜ್ವಲ್ನ ಪ್ರಾಮಾಣಿಕತೆಯ ಕಥೆಯನ್ನು ವಿದ್ಯಾರ್ಥಿಗಳಿಗೆ ಮಾದರಿಯಾಗಿಸಲು ಶಾಲಾ ಗೋಡೆಗಳ ಮೇಲೆ ಆತನ ಫೋಟೋ ಪ್ರದರ್ಶಿಸಲು ಸೂಚಿಸಲಾಗಿದೆ. ನಿಧಿಯ ಒಟ್ಟು ಮೌಲ್ಯದ ಒಂದು ಭಾಗವನ್ನು (ಸುಮಾರು 20%) ಬಹುಮಾನವಾಗಿ ನೀಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…

