ಉಪ್ಪಿನಂಗಡಿಯ ವೇದಶಂಕರ ನಗರದ ಶ್ರೀರಾಮ ಶಾಲೆಗೆ ಯುವ ಬೆಂಗಳೂರು ಟ್ರಸ್ಟ್ ಇವರು ಕೊಡ ಮಾಡಿರುವ ಇಂಟರ್ ಆಕ್ಟಿವ್ ಸ್ಮಾರ್ಟ್ ಕ್ಲಾಸ್ ಇದರ ಉದ್ಘಾಟನೆಯನ್ನು ಜ.8 ರಂದು ನಡೆಸಲಾಯಿತು.
ಯುವ ಬೆಂಗಳೂರು ಟ್ರಸ್ಟ್ ಸ್ಥಾಪಕ ಮತ್ತು ಟ್ರಸ್ಟಿ ಜಿ ಕಿರಣ್ ಸಾಗರ್ ದೀಪ ಬೆಳಗಿಸುವ ಮೂಲಕ ಇಂಟರ್ ಆಕ್ಟಿವ್ ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಜೀವನದಲ್ಲಿ ವ್ಯಕ್ತಿ ಬದಲಾಗಬೇಕಾದರೆ ಮತ್ತು ಸಫಲನಾಗಬೇಕಾದರೆ ಆತನ ತಪ್ಪನ್ನು ತಿದ್ದುವ ಕೆಲಸವಾಗಬೇಕು. ನಮ್ಮ ಹಿತವನ್ನು ಬಯಸುವವರು ನಮ್ಮ ಹೆತ್ತವರು ಮತ್ತು ಶಿಕ್ಷಕರು ಮಾತ್ರ. ತಾಯಿ ಮತ್ತು ಮಾತೃಭೂಮಿಯನ್ನು ಸದಾ ಗೌರವಿಸಬೇಕಿರುವುದು ಎಲ್ಲರ ಕರ್ತವ್ಯ, ಮಕ್ಕಳು ದೇವರ ಪ್ರತಿರೂಪ ಇದ್ದಂತೆ. ಶಾಲಾ ಶಿಕ್ಷಕರು ಈ ದೇಶದ ನಿಜವಾದ ನಿರ್ಮಾತೃಗಳು ಮತ್ತು ನಿರ್ಮಾಪಕರು. ಶಾಲೆಗಳಲ್ಲಿ ಇರುವ ಶಿಕ್ಷಕರು ಶಾಲೆಗಳಲ್ಲಿ ಶಿಕ್ಷಕರಾಗಿಯೇ ಉಳಿಯುತ್ತಾರೆ. ಆದರೆ ಅವರಿಂದ ಬೋಧನೆಯನ್ನು ಪಡೆದ ವಿದ್ಯಾರ್ಥಿಗಳು ದೇಶದ, ಪ್ರಪಂಚದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುವುದರ ಮೂಲಕ ಶಿಕ್ಷಕರಿಗೆ ಗೌರವವನ್ನು ತಂದುಕೊಡುತ್ತಾರೆ. ಇಂದಿನ ತಂತ್ರಜ್ಞಾನ ಆಧಾರಿತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಕೂಡ ತಂತ್ರಜ್ಞಾನ ಬಳಸಿ ಪಾಠ ಮಾಡಲು ಅನುಕೂಲವಾಗುವಂತೆ ನಾವು ಸ್ಮಾರ್ಟ್ ಕ್ಲಾಸ್ ಸಾಧನಗಳನ್ನು ನೀಡುತ್ತಿದ್ದೇವೆ” ಎಂದರು.
ಯುವ ಬೆಂಗಳೂರು ಟ್ರಸ್ಟಿನ ಅಧ್ಯಕ್ಷ ಬಿ ವಿ.ಸುನಿಲ್ ಇವರು ಪ್ರಸ್ತಾವಿಕ ಮಾತುಗಳನ್ನಾಡಿ, “ಕನ್ನಡ ಶಾಲೆಗಳನ್ನು ಉಳಿಸುವ ಬೆಳೆಸುವ ಪ್ರಯತ್ನವನ್ನು ಯುವ ಬೆಂಗಳೂರು ಟ್ರಸ್ಟ್ ಮಾಡುತ್ತಿದೆ. ಗ್ರಾಮೀಣ ಶಾಲೆಯ ಬಡ ವಿದ್ಯಾರ್ಥಿಗಳಿಗೂ ಕೂಡ ಆಧುನಿಕ ತಂತ್ರಜ್ಞಾನ ಆಧಾರಿತ ಕಲಿಕೆ ತಲುಪಬೇಕು ಎಂಬ ನಿಟ್ಟಿನಲ್ಲಿ ಸಂಸ್ಥೆಯು ಕೆಲಸ ಮಾಡುತ್ತಿದೆ” ಎಂದರು.

ಇದನ್ನೂ ಓದಿ : ಉಡುಪಿ ಪರ್ಯಾಯ ಮಹೋತ್ಸವ: ಸಂಚಾರ ಮಾರ್ಗಗಳಲ್ಲಿ ಬದಲಾವಣೆ
ಶ್ರೀರಾಮ ಶಾಲೆಯ ಆಡಳಿತ ಸಮಿತಿ ಉಪಾಧ್ಯಕ್ಷೆ ಅನುರಾಧಾ ಆರ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಯು ಜಿ ರಾಧ ಕೊಡುಗೆಯನ್ನು ನೀಡಿದ ಯುವ ಬೆಂಗಳೂರು ಸಂಸ್ಥೆಗೆ ವಂದನೆಗಳನ್ನು ಸಮರ್ಪಿಸಿದರು.
ಪ್ರಾಥಮಿಕ ವಿಭಾಗದ ಪ್ರಭಾರ ಮುಖ್ಯ ಶಿಕ್ಷಕಿಯರಾದ ಉಷಾ ಸ್ವಾಗತಿಸಿ ಗೀತಾ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ರಘುರಾಮ ಭಟ್ ಸಿ ಅವರು ವಂದಿಸಿದರು.
ಸಮಾರಂಭದಲ್ಲಿ ಶಾಲಾ ಹಿತೈಷಿ ಕೈಲಾರು ರಾಜಗೋಪಾಲ ಭಟ್, ಶಾಲಾ ಆಡಳಿತ ಮಂಡಳಿ ಸದಸ್ಯರು, ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

