Breaking News

ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ತುಳುನಾಡಿನ ಸಾಂಪ್ರದಾಯಿಕ ‘ಕೆಡ್ಡಸ’ ಹಬ್ಬದ ಸಂಭ್ರಮ

ಕಲ್ಲಡ್ಕ: ನಮ್ಮ ಮಣ್ಣಿನ ಸಂಸ್ಕೃತಿ ಮತ್ತು ಪ್ರಕೃತಿ ಆರಾಧನೆಯ ಸಂಕೇತವಾಗಿರುವ ‘ಕೆಡ್ಡಸ’ ಹಬ್ಬವನ್ನು ಕಲ್ಲಡ್ಕದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ದಿನಾಂಕ 12.02.2026ರಂದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಸಂಪ್ರದಾಯಬದ್ಧ ಆಚರಣೆ:

Advertisement

ಕಾರ್ಯಕ್ರಮದ ಆರಂಭದಲ್ಲಿ ತುಳಸಿಕಟ್ಟೆಯ ಮುಂದೆ ಭೂಮಿ ದೇವಿಯ ಸಾನಿಧ್ಯ ರಚಿಸಿ, ದೀಪ ಬೆಳಗಿಸಲಾಯಿತು. ಭೂಮಿತಾಯಿಯ ಋತುಸ್ನಾನದ ಸಂಕೇತವಾಗಿ ತುದಿ ಎಲೆಯ ಮೇಲೆ ಎಣ್ಣೆ, ಸೀಗೆಕಾಯಿ, ಅರಿಶಿನ-ಕುಂಕುಮ ಹಾಗೂ ಭಕ್ಷ್ಯಗಳನ್ನು ಇಡಲಾಯಿತು. ಊರಿನ ಹಿರಿಯ ಮಾತೃಶ್ರೀ ಜಯಂತಿ ಅವರು ಭೂಮಿಗೆ ಎಣ್ಣೆ-ಹಾಲು ಹಾಕಿ, ಸಾಂಪ್ರದಾಯಿಕ ‘ನನ್ನೇರಿ’ (ಹುರುಳಿ, ಹೆಸರುಕಾಳು, ಕೊಬ್ಬರಿ, ಕಡಲೆಕಾಯಿ ಮಿಶ್ರಣ) ಬಡಿಸುವ ಮೂಲಕ ಕೆಡ್ಡಸದ ವಿಧಿವಿಧಾನಗಳನ್ನು ಪೂರೈಸಿದರು.

ಕೆಡ್ಡಸದ ಮಹತ್ವ:

“ಕೆಡ್ಡಸವು ಭೂಮಿಯ ಫಲವತ್ತತೆಯನ್ನು ಆರಾಧಿಸುವ ಕೃಷಿ ಆಧಾರಿತ ಹಬ್ಬ. ಭೂಮಿಯನ್ನು ತಾಯಿಯೆಂದು ಭಾವಿಸುವ ನಮ್ಮ ಸಂಸ್ಕೃತಿಯಲ್ಲಿ, ಈ ಮೂರು ದಿನ ಭೂಮಿತಾಯಿ ರಜಸ್ವಾಲೆಯಾಗುತ್ತಾಳೆ ಎಂಬ ನಂಬಿಕೆಯಿದೆ. ಹಾಗಾಗಿ ಈ ಸಮಯದಲ್ಲಿ ನೆಲ ಅಗೆಯುವುದು ಅಥವಾ ಮರ ಕಡಿಯುವುದು ನಿಷಿದ್ಧ. ಈ ಆಚರಣೆಗಳು ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ ಕಾಳಜಿ ಮತ್ತು ಭಕ್ತಿ ಮೂಡಿಸುತ್ತವೆ,” ಶಾಲೆಯ ಅಧ್ಯಾಪಕಿ ದೇವಿಕಾ ಪಿ. ಶೆಟ್ಟಿ ಎಂದು ತಿಳಿಸಿದರು.

ಗೌರವ ಸನ್ಮಾನ:

ಪ್ರತಿ ವರ್ಷ ಶಾಲೆಯಲ್ಲಿ ಕೆಡ್ಡಸ ಬಡಿಸಲು ಸಹಕರಿಸುವ ಹಿರಿಯರಾದ ಜಯಂತಿ ಅವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯರಾದ ಭೂಮಿಕಾ, ವೈದೇಹಿ, ಸಾನ್ವಿ ಮತ್ತು ಗೌರಿನಂದಿನಿ ಕೆಡ್ಡಸದ ಹಾಡುಗಳನ್ನು ಹಾಡಿ ಸಾಂಸ್ಕೃತಿಕ ಮೆರುಗು ನೀಡಿದರು.

ಇದನ್ನೂ ಓದಿ: ವಿಬಿ ಜಿರಾಮ್‌ ಜಿ: ಜೆಸಿಬಿ ಮೂಲಕ ಕೆಲಸ ಮಾಡಿ ಬಡವರ ಹಣ ಕಬಳಿಸುವುದು ಸಾಧ್ಯವಿಲ್ಲ: ಕೋಟ ಶ್ರೀನಿವಾಸ್‌ ಪೂಜಾರಿ

ವೇದಿಕೆಯಲ್ಲಿ ರಾಷ್ಟ್ರಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ ಭಟ್, ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮಿ ರಘುರಾಜ್ ಮತ್ತು ಮಲ್ಲಿಕಾ ಆರ್. ಶೆಟ್ಟಿ, ಹಿರಿಯ ಸ್ವಚ್ಛತಾ ಸಹಾಯಕಿ ಸುಮತಿ ಹಾಗೂ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತನ್ಮಯಿ ರೈ ಸ್ವಾಗತಿಸಿದರೆ, ಪ್ರಾಪ್ತಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಸಧ್ವಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಸಾಂಪ್ರದಾಯಿಕ ‘ನನ್ನೇರಿ’ ಪ್ರಸಾದವನ್ನು ಹಂಚಲಾಯಿತು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು