ಕಡಬ: ಬಿಜೆಪಿ ಸುಳ್ಯ ಮಂಡಲ ಇದರ ನೇತೃತ್ವದಲ್ಲಿ ಭ್ರಷ್ಟಚಾರ ಮುಕ್ತ ಆಡಳಿತಕ್ಕಾಗಿ, ವಿಕಸಿತ ಭಾರತ -ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಗ್ಯಾರಂಟಿ ಗ್ರಾಮೀಣ (VBG-RAM G) ಅಡಿಯಲ್ಲಿ ಮಹಾತ್ಮಾಗಾಂಧಿ ಯೋಜನೆಯಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕಲು ಹಾಗೂ ಕೇಂದ್ರ ಸರ್ಕಾರದ ಹೊಸ ಕಾಯ್ದೆಯ ಬಗ್ಗೆ ಜನಜಾಗೃತಿ ಮೂಡಿಸಲು ಕಡಬದಲ್ಲಿ ಬೃಹತ್ ಕಾಲ್ನಡಿಗೆ ಜಾಥ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಉಡುಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಪ್ರಜಾಪ್ರಭುತ್ವದಲ್ಲಿ ಟೀಕೆಗಳು, ಆರೋಪಗಳು ಸಹಜ, ಆದರೆ ಸತ್ಯದ ಪ್ರಶ್ನೆ ಬಂದಾಗ ಎಲ್ಲರೂ ಒಟ್ಟಾಗಿ ಸತ್ಯವನ್ನು ಒಪ್ಪಿಕೊಳ್ಳಬೇಕು. ನರೇಂದ್ರ ಮೋದಿಯವರ ಸರ್ಕಾರ ತಂದಿರುವ ವಿಬಿ ಜಿ ರಾಮಜಿ ಯೋಜನೆ ಬಡವರ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಪಕ್ಷವು ಅಪಪ್ರಚಾರ ಮಾಡುತ್ತಿದೆ. ಅಲ್ಲದೆ, ಉದ್ಯೋಗ ಖಾತ್ರಿ ರದ್ದು ಮಾಡಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ. ಆದರೆ, ಉದ್ಯೋಗ ಖಾತ್ರಿ ರದ್ದಾಗಿಲ್ಲ, ಬದಲಾಗಿ ನರೇಂದ್ರ ಮೋದಿ ಸರ್ಕಾರವು 100 ದಿನಗಳ ಕೆಲಸವನ್ನು 125 ದಿನಗಳಿಗೆ ಹೆಚ್ಚಿಸಿದೆ ಎಂದರು.

ಇದನ್ನೂ ಓದಿ: ಛಲವಾದಿ ನಾರಾಯಣಸ್ವಾಮಿ ವಿರುದ್ಧ ಜಾತಿ ನಿಂದನೆ: ಕಾಂಗ್ರೆಸ್ ಶಾಸಕ ಅಶೋಕ್ ರೈ ವಿರುದ್ಧ ಬಿಜೆಪಿ ದೂರು
ಯುಪಿಎ ಸರ್ಕಾರದ ಅವಧಿಯಲ್ಲಿ 100 ದಿನಗಳ ಕೆಲಸಕ್ಕೆ 17,500 ರೂಪಾಯಿ ಸಿಗುತ್ತಿತ್ತು. ಆದರೆ, ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ 125 ದಿನಗಳ ಕೆಲಸಕ್ಕೆ 46,500 ರೂಪಾಯಿ ಸಿಗುತ್ತದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಉದ್ಯೋಗ ಖಾತ್ರಿ ವೇತನ 15 ದಿನಗಳೊಳಗೆ ಸಿಗಬೇಕಿತ್ತು, ಆದರೆ ವಿಳಂಬವಾಗುತ್ತಿತ್ತು. ಮೋದಿ ಸರ್ಕಾರವು 7 ದಿನಗಳೊಳಗೆ ವೇತನ ಪಾವತಿಸುವ ನಿಯಮ ಜಾರಿಗೆ ತಂದಿದೆ. ಕಾಂಗ್ರೆಸ್ ಪಕ್ಷವು 60 ದಿನಗಳ ರಜೆ ನೀಡಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದೆ. ಆದರೆ, ರಾಜ್ಯ ಸರ್ಕಾರವು ಇಚ್ಛಿಸಿದಲ್ಲಿ 60 ದಿನಗಳ ರಜೆ ಘೋಷಿಸಬಹುದು, ಇದರಿಂದ ರೈತರಿಗೆ ಕೃಷಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರು.


ನರೇಂದ್ರ ಮೋದಿ ಸರ್ಕಾರವು ಭ್ರಷ್ಟಾಚಾರವನ್ನು ತಡೆಯಲು ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಜೆಸಿಬಿ ಮೂಲಕ ಕೆಲಸ ಮಾಡಿ ಬಡವರ ಹಣವನ್ನು ಕಬಳಿಸುವುದು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದಲ್ಲಿ 2020 ರಿಂದ 2023 ರವರೆಗೆ 22,500 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಮಹಾತ್ಮ ಗಾಂಧಿ ಹೆಸರನ್ನು ಬದಲಾಯಿಸಿಲ್ಲ, ಬದಲಾಗಿ ಪಾರದರ್ಶಕತೆ ತರಲು ಈ ಕಾನೂನು ತರಲಾಗಿದೆ. ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧಿಯವರ ಹೆಸರನ್ನು ಬದಲಾಯಿಸಿದೆ ಎಂದು ಆರೋಪಿಸುತ್ತಿದೆ. ಆದರೆ, ಬಿಜೆಪಿ ಪಕ್ಷವು ಗಾಂಧಿ ಪ್ರೇರಿತ ಪಂಚಸೂತ್ರಗಳನ್ನು ಅನುಸರಿಸುತ್ತದೆ ಎಂದರು.
ಇದನ್ನೂ ಓದಿ: ಸುಳ್ಳು ಜಾಹೀರಾತು ಪ್ರಕರಣ: ರಾಹುಲ್ ಗಾಂಧಿಗೆ ಬಿಗ್ ರಿಲೀಫ್
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಗ್ರಾಮ ಪಂಚಾಯತಿಗಳಿಗೆ ನೀಡುವ ಅನುದಾನದ ಬಗ್ಗೆ ಸತ್ಯವನ್ನು ಜನರಿಗೆ ತಿಳಿಸಬೇಕು. ರಾಜೀವ್ ಗಾಂಧಿಯವರ ಕಾಲದಲ್ಲಿ ಒಂದು ರೂಪಾಯಿಯಲ್ಲಿ 15 ಪೈಸೆ ಮಾತ್ರ ಗ್ರಾಮ ಪಂಚಾಯತಿಗೆ ಸಿಗುತ್ತಿತ್ತು. ಆದರೆ, 2014ರ ನಂತರ ನರೇಂದ್ರ ಮೋದಿ ಸರ್ಕಾರವು 14ನೇ ಮತ್ತು 15ನೇ ಹಣಕಾಸು ಆಯೋಗದ ಮೂಲಕ ಲಕ್ಷಾಂತರ ರೂಪಾಯಿಗಳನ್ನು ನೇರವಾಗಿ ಗ್ರಾಮ ಪಂಚಾಯತಿಗಳಿಗೆ ವರ್ಗಾಯಿಸುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷವು ಕಲ್ಲು ಮತ್ತು ಮರಳು ಸಮಸ್ಯೆಗಳಿದ್ದಾಗ ಹೋರಾಟ ಮಾಡಲಿಲ್ಲ, ಆದರೆ ಈಗ ವಿಬಿಜಿ ರಾಮ್ಜಿ ಯೋಜನೆ ಬಗ್ಗೆ ಹೋರಾಟ ಮಾಡುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಅನೇಕ ಗ್ರಾಮ ಪಂಚಾಯತಿ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ತಿಳಿಸಲಿಲ್ಲ. ವಿಬಿಜಿ ರಾಮ್ಜಿ ಎಂಬ ಹೊಸ ಕಾಯ್ದೆಗೆ ರಾಮನ ಹೆಸರಿಟ್ಟಿರುವುದಕ್ಕೆ ಕಾಂಗ್ರೆಸ್ ವಿರೋಧಿಸುತ್ತಿದೆ. ರಾಮ, ರಾಮಮಂದಿರ, ಕಾಶ್ಮೀರ, ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರೀಯ ವಿಚಾರಗಳ ಬಗ್ಗೆ ಕಾಂಗ್ರೆಸ್ಗೆ ಸಮಸ್ಯೆ ಇದೆ ಎಂದು ಹೇಳಲಾಗಿದೆ ಎಂದರು.
ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ನೀಡಿದವರು ಬಿಜೆಪಿ ಮತ್ತು ನರೇಂದ್ರ ಮೋದಿ ಸರ್ಕಾರ. ಕಾಂಗ್ರೆಸ್ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿತ್ತು. ವಾಜಪೇಯಿ ಸರ್ಕಾರವು ಸರ್ವ ಶಿಕ್ಷಣ ಅಭಿಯಾನದ ಮೂಲಕ ಕಟ್ಟಡ ರಹಿತ ಶಾಲೆಗಳಿಗೆ ಹೊಸ ರೂಪ ನೀಡಿತು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಿತು. ನರೇಂದ್ರ ಮೋದಿ ಸರ್ಕಾರವು ಗ್ಯಾಸ್ ಸಂಪರ್ಕವನ್ನು ಮನೆ ಮನೆಗೆ ತಲುಪಿಸಿತು.
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು VBG RAM G ಯೋಜನೆಯಿಂದ ಜನರಿಗೆ ಒಳ್ಳೆಯದಾಗಿದೆ ಎಂಬ ಸಂದೇಶವನ್ನು ಜನರಿಗೆ ತಲುಪಿಸಬೇಕು ಮತ್ತು ಕಾಂಗ್ರೆಸ್ನ ಸುಳ್ಳು ಪ್ರಚಾರವನ್ನು ಎದುರಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ ಪ್ರಸನ್ನ ಮಾರ್ತ, ರಾಕೇಶ ರೈ ಕೆಡೆಂಜಿ, ಸಹಿತ ಹಲವಾರು ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

