ಕಲ್ಲಡ್ಕ: ವಿಜ್ಞಾನವು ಕೇವಲ ಪುಸ್ತಕಕ್ಕಷ್ಟೇ ಸೀಮಿತವಾಗದೆ ದೈನಂದಿನ ಜೀವನದ ಭಾಗವಾಗಬೇಕು ಎಂಬ ಆಶಯದೊಂದಿಗೆ, ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಫೆಬ್ರವರಿ 28, 2026 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ನೀರಿನ ಕಾರಂಜಿ ಚಿಮ್ಮಿಸುವುದರ ಮೂಲಕ ಕಾರ್ಯಕ್ರಮಕ್ಕೆ ವಿಶಿಷ್ಟ ಚಾಲನೆ ನೀಡಿದರು. ಸರ್ ಸಿ.ವಿ. ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.


“ಇಂದಿನ ವಿಜ್ಞಾನವೇ ಮುಂದಿನ ತಂತ್ರಜ್ಞಾನ. ವೈದ್ಯಕೀಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಭಾರತೀಯವಿಜ್ಞಾನಿಗಳ ಕೊಡುಗೆ ಅಪಾರ,” ಎಂದು ವಿವೇಕಾನಂದ ಸೆಂಟ್ರಲ್ ಸ್ಕೂಲ್ ಅಧ್ಯಕ್ಷರು ವಸಂತಿ ಕೆ ತಿಳಿಸಿದರು. ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಪ್ರೊಫೆಸರ್ ಡಾ. ಸವಿತಾ ಎಂ.ಬಿ, ಯತ್ನವಿದ್ದರೆ ಪ್ರಪಂಚವೇ ನಮ್ಮನ್ನು ಗುರುತಿಸುತ್ತದೆ ಎಂಬುದಕ್ಕೆ ನೊಬೆಲ್ ವಿಜೇತ ಸಿ.ವಿ. ರಾಮನ್ ಅವರೇ ನಿದರ್ಶನ,” ಎಂದರು.

ವಿಜ್ಞಾನವು ಸಂಸ್ಕೃತಿ ಮತ್ತು ಜೀವನ ಪದ್ಧತಿಗೆ ಪೂರಕವಾಗಿರಬೇಕು. ಕೃಷಿಯಲ್ಲಿ ವಿಜ್ಞಾನದ ಬಳಕೆ ಹೆಚ್ಚಾಗಬೇಕು ಮತ್ತು ಯುವಜನತೆ ಕೃಷಿಯತ್ತ ಆಸಕ್ತಿ ತಳೆಯಬೇಕು,” ಎಂದು ಸಹಜ ಕೃಷಿ ತಜ್ಞ ಶಿವಪ್ರಸಾದ ಮಲೆಬೆಟ್ಟು ಕರೆ ನೀಡಿದರು. ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ವಸಂತಿ ಕೆ, ಡಾ. ಸವಿತಾ ಎಂ.ಬಿ ಮತ್ತು ಶಿವಪ್ರಸಾದ ಮಲೆಬೆಟ್ಟು ಅವರನ್ನು ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ವಿಜ್ಞಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಇದನ್ನೂ ಓದಿ: ಉನ್ನತ ಶಿಕ್ಷಣಕ್ಕೆ ಬಲ; 2,000 ಬೋಧಕ ಸಿಬ್ಬಂದಿ ನೇಮಕಾತಿಗೆ ಸಿಎಂ ಸಿದ್ದರಾಮಯ್ಯ ಅಸ್ತು!
ವಿದ್ಯಾರ್ಥಿಗಳು ತಯಾರಿಸಿದ ವೈವಿಧ್ಯಮಯ ವಿಜ್ಞಾನ-ಗಣಿತ ಮಾದರಿಗಳು ಮತ್ತು ಔಷಧೀಯ ಸಸ್ಯಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಅತಿಥಿಗಳು ಪ್ರದರ್ಶನವನ್ನು ವೀಕ್ಷಿಸಿ, ವಿದ್ಯಾರ್ಥಿಗಳ ವಿವರಣೆಯನ್ನು ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

