ಕಾಪು (ಉಡುಪಿ): 2026ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಅಮೋಘ ಜಯ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರುತ್ತಿದ್ದಂತೆಯೇ, ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಅವರು ತುಳುನಾಡಿನ ದೈವಶಕ್ತಿ ಕಾಪು ಮಾರಿಯಮ್ಮನ ಸನ್ನಿಧಿಗೆ ಆಗಮಿಸಿದ್ದಾರೆ.
ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ಅವರು ಕಾಪು ಮಾರಿಯಮ್ಮನಿಗೆ ವಿಶೇಷ ಹರಕೆ ಹೊತ್ತಿದ್ದರು ಎನ್ನಲಾಗಿದೆ. ಭಾರತ ವಿಶ್ವಕಪ್ ಗೆಲ್ಲಲಿ ಮತ್ತು ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಲಿ ಎಂದು ಬೇಡಿಕೊಂಡಿದ್ದರು. ಅದರಂತೆ ಇಂದು ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರು ದೇವಸ್ಥಾನಕ್ಕೆ ಆಗಮಿಸಿದಾಗ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು. ದೇವಿಗೆ ವಿಶೇಷ ಹೂವಿನ ಪೂಜೆ ಹಾಗೂ ಗಂಧದ ಸೇವೆ ಸಲ್ಲಿಸಿದ ಅವರು, ದೇವಿಯ ದರ್ಶನ ಪಡೆದು ಪುನೀತರಾದರು.ಸೂರ್ಯಕುಮಾರ್ ಆಗಮನದ ಸುದ್ದಿ ತಿಳಿಯುತ್ತಿದ್ದಂತೆಯೇ ಕಾಪುವಿನಲ್ಲಿ ಅಭಿಮಾನಿಗಳು ಸಾಗರೋಪಾದಿಯಲ್ಲಿ ಜಮಾಯಿಸಿದ್ದರು. ತಮ್ಮ ನೆಚ್ಚಿನ ಆಟಗಾರನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ಇದನ್ನೂ ಓದಿ: ಸೋಲಿನ ಕ್ಷಣ: ಪತ್ನಿಯರಿಂದ ಅಪ್ಪುಗೆಯ ಧೈರ್ಯ; ಲಿಪ್ಕಿಸ್ ಕೊಟ್ಟ ಕಿವೀಸ್ನ ಫಿಲಿಪ್ಸ್, ಸೋಧಿ- ವಿಡಿಯೋ ವೈರಲ್
ಉಡುಪಿಯ ಕಾಪು ಮಾರಿಯಮ್ಮ ಅತ್ಯಂತ ಶಕ್ತಿಶಾಲಿ ದೇವತೆ ಎಂದು ನಂಬಲಾಗಿದೆ. ಕೇವಲ ಸೂರ್ಯಕುಮಾರ್ ಮಾತ್ರವಲ್ಲದೆ, ಕನ್ನಡಿಗ ಕೆ.ಎಲ್. ರಾಹುಲ್ ಸೇರಿದಂತೆ ಅನೇಕ ಕ್ರಿಕೆಟಿಗರು ಈ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಿರುತ್ತಾರೆ. ಸೂರ್ಯಕುಮಾರ್ ಈ ಬಾರಿ ವಿಶ್ವಕಪ್ನಲ್ಲಿ ನೀಡಿದ ಅದ್ಭುತ ಪ್ರದರ್ಶನದ ಹಿಂದೆ ಈ ದೈವದ ಆಶೀರ್ವಾದವೂ ಇದೆ ಎಂಬುದು ಅಭಿಮಾನಿಗಳ ಮಾತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

