ಕಾಣಿಯೂರು: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಕಾಮಗಾರಿಗಳ ಗುದ್ದಲಿಪೂಜೆ ನಡೆಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು, ಘನತ್ಯಾಜ್ಯ ಘಟಕದ ಕಟ್ಟಡ ಮತ್ತು ರುದ್ರಾಭೂಮಿ ಕಟ್ಟಡವನ್ನೂ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮನೆಯಲ್ಲಿಯೇ ಕಸವನ್ನು ಬೇರ್ಪಡಿಸಿ, ಒಣ ಕಸವನ್ನು ಸುಡಲು ಮತ್ತು ಹಸಿ ಕಸವನ್ನು ಗೊಬ್ಬರವಾಗಿ ಬಳಸಲು ಸಲಹೆ ನೀಡಿದರು.
ಸ್ಮಶಾನದ ಸುತ್ತಮುತ್ತ ಅಡಿಕೆ ಗಿಡಗಳನ್ನು ನೆಡಲಾಗಿದೆ ಇದರಿಂದ ಪರಿಸರ ಜಾಗೃತಿಗೂ ಒತ್ತು ನೀಡಲಾಗಿದೆ. ಕಾಣಿಯೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಶಾಲೆಗಳು, ಹೈಸ್ಕೂಲ್, ಕಾಲೇಜು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳಿವೆ ಎಂದರು.

ಇದನ್ನೂ ಓದಿ: ರಾಮಕುಂಜ: ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ, ಕಾಮಗಾರಿಗಳ ಉದ್ಘಾಟನೆ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ

ರೈಲ್ವೆ ನಿಲ್ದಾಣ ಕೂಡ ಇದೆ, ರೈಲು ನಿಲ್ದಾಣವನ್ನು ಏಲಡ್ಕಕ್ಕೆ ಸ್ಥಳಾಂತರಿಸಿ ಉನ್ನತ ದರ್ಜೆಯ ನಿಲ್ದಾಣ ಮಾಡಿ ಅಲ್ಲಿಂದ ಸುಳ್ಯ- ಕುಶಾಲನಗರ- ಮೈಸೂರು, ಸುಳ್ಯ – ನಾಪೊಕ್ಲು- ಕಾಂಞಂಗಾಡು ರೈಲ್ವೆ ಹಳಿ ನಿರ್ಮಿಸಿ ರೈಲು ಸಂಚಾರಮಾಡುವಂತೆ ಮನವಿ ಸಲ್ಲಿಸಲಾಗಿದೆ. ಜೂನಿಯರ್ ಕಾಲೇಜಿಗೆ ರಸ್ತೆ ನಿರ್ಮಾಣ ಮತ್ತು ಶಾಲೆಗೆ ನೂತನ ಕೊಠಡಿ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ ಎಂದರು.

ಗ್ರಾಮ ಪಂಚಾಯತ್ನ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ ಮತ್ತು ಮುಂದಿನ ದಿನಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿ ಇನ್ನೂ ಕೆಲವು ದಿನಗಳಲ್ಲಿ ಹಲವಾರು ಮಂದಿ ಮಾಜಿ ಸದಸ್ಯರು ಆಗುತ್ತಾರೆ. ಮಾಜಿ ಆದವರು ಇನ್ನು ನನ್ನ ಅವಧಿ ಮುಗಿಯಿತು ಎಂದು ಸುಮ್ಮನೆ ಇರಬಾರದು ನಿರಂತರವಾಗಿ ಜನರ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ವಸಂತ, ಉಪಾಧ್ಯಕ್ಷೆ ಗಂಗಮ್ಮ, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಚಾರ್ವಕ ಇದರ ಅಧ್ಯಕ್ಷ ಗಣೇಶ್ ಕೆ.ಎಸ್ ಉದನಡ್ಕ, ತಾಲೂಕು ಪಂಚಾಯಿತಿನ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ಗ್ರಾಮ ಪಂಚಾಯಿತಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ರಘು ಸಹಿತ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

